ಆದೇಶ ಪಾಲಿಸದ ಬಿಬಿಎಂಪಿ, ಮರ ವಿಜ್ಞಾನ ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಹೈಕೋರ್ಟ್ ಆಕ್ರೋಶ
ಬೆಂಗಳೂರು, ಜ.20: ನಗರದಲ್ಲಿ ಮರಗಳ ಗಣತಿ ಕಾರ್ಯ ಆರಂಭ ವಿಚಾರದಲ್ಲಿ ಆದೇಶ ಪಾಲಿಸದ ಬಿಬಿಎಂಪಿ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿ ಮೆಟ್ರೋ ಕಾಮಗಾರಿಗೆ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಬೀದಿಗಳಲ್ಲಿನ ಮರಗಳನ್ನು ಮಾತ್ರ ಎಣಿಕೆ ಮಾಡಲಾಗುವುದು. ಖಾಸಗಿ ಜಾಗ ಮತ್ತು ಆಸ್ತಿಗಳಲ್ಲಿನ ಮರಗಳನ್ನು ಗಣತಿಗೆ ಪರಿಗಣಿಸಲಾಗುವುದಿಲ್ಲ ಎಂದು ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಒಪ್ಪಂದ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಮುಖ್ಯವಾಗಿ ಮರಗಳ ಗಣತಿ ಕಾರ್ಯ ನಡೆಸುವ ಸಂಬಂಧ ನ್ಯಾಯಾಲಯ ನೀಡಿದ ಆದೇಶಗಳನ್ನು ಪಾಲಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಒಡಂಬಡಿಕೆ ವಿಚಾರದಲ್ಲಿ ಎಲ್ಲೆಲ್ಲಿ ತಪ್ಪು ನಡೆದಿದೆ, ಅದು ಹೇಗೆ ಆಯಿತು. ತಪ್ಪಿತಸ್ಥರ ವಿರುದ್ಧ ಏನು ಕ್ರಮ, ಮುಂದಿನ ತೀರ್ಮಾನ ಏನು ಎಂಬ ಬಗ್ಗೆ ವಿವರಗಳೊಂದಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆಗೆ ನ್ಯಾಯಪೀಠ ನಿರ್ದೇಶನ ನೀಡಿ, ವಿಚಾರಣೆಯನ್ನು ಫೆ.11ಕ್ಕೆ ಮುಂದೂಡಿತು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಸಂಬಂಧಿಸಿದಂತೆ 2019ರ ಆ.20ರಂದು ಹೈಕೋರ್ಟ್ ವಿವರವಾದ ಆದೇಶ ಮಾಡಿತ್ತು. ಒಂದು ತಿಂಗಳಲ್ಲಿ ಗಣತಿ ಕಾರ್ಯ ಆರಂಭಿಸುವುದಾಗಿ ಅ.10ರಂದು ಬಿಬಿಎಂಪಿ ಹೈಕೋರ್ಟ್ಗೆ ಮುಚ್ಚಳಿಕೆ ಸಲ್ಲಿಸಿತ್ತು. ಆದರೆ, ಗಣತಿ ಕಾರ್ಯ ಇನ್ನೂ ಆರಂಭಿಸಲಾಗಿಲ್ಲ.