ಸಂಚಾರ ನಿಯಮಗಳ ಉಲ್ಲಂಘನೆ: ದಂಡದ ಪ್ರಮಾಣ ಹೆಚ್ಚಳ ಕಾಯ್ದೆಗೆ ತಿದ್ದುಪಡಿ
ಬಳ್ಳಾರಿ, ಜ.26 : ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಳದ ಸಂಬಂಧ ಮುಂದಿನ ಅಧಿವೇಶದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿಂದು 71 ನೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಚಾರ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಅಧಿಕವಾಗುತ್ತಲೇ ಇವೆ. ಇದರಿಂದ ಅಪಘಾತಗಳ ಪ್ರಮಾಣವೂ ಅಧಿಕವಾಗಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ದಂಡದ ಪ್ರಮಾಣವನ್ನು ಹೆಚ್ಚಿಸಲು ನಿರ್ಧಾರ ಮಾಡಿದ್ದು, ಸದ್ಯದಲ್ಲಿಯೇ ತಿದ್ದುಪಡಿಗೆ ಚಾಲನೆ ನೀಡಲಾಗುವುದು ಎಂದರು.
ಸಾರಿಗೆ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ 7, 500 ಕೋಟಿ ಆದಾಯ ಸಂಗ್ರಹಿಸುವ ಗುರಿಯಿದೆ. ಆದರೆ, ಒಂದು ಸಾವಿರ ಖೋತಾ ಬೀಳುವ ಸಾಧ್ಯತೆಯಿದೆ. ನೆರೆ ರಾಜ್ಯಗಳಲ್ಲಿ ನೋಂದಣಿ ಶುಲ್ಕ ಕಡಿಮೆಯಿದೆ. ಆದುದರಿಂದಾಗಿ, ಬಹು ವೌಲ್ಯದ ವಾಹನಗಳ ನೋಂದಣಿ ಇತರೆ ರಾಜ್ಯಗಳಲ್ಲಿ ಮಾಡಿಸುತ್ತಿದ್ದು, ನಮ್ಮಲ್ಲಿ ಆದಾಯ ಸಂಗ್ರಹ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಇಂದು ಸಭೆ: ಸಾರಿಗೆ ಇಲಾಖೆಯಲ್ಲಿ ಹಲವು ನ್ಯೂನತೆಗಳಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ನಾಳೆ(ಜ.27) ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಲಾಗಿದೆ. ಅಲ್ಲಿ ಆದಾಯ ಸೋರಿಕೆ, ಹೊಸ ಸಾರಿಗೆ ವ್ಯವಸ್ಥೆ, ವಿದೇಶಿ ಬಂಡವಾಳ ಹೂಡಿಕೆ, ಸರಕಾರಿ ನೌಕರರಾಗಿ ಪರಿಗಣನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಸಚಿವರು ಹೇಳಿದರು.
ವಿದ್ಯುತ್ ಚಾಲಿತ ಬಸ್: ಬಿಎಂಟಿಸಿಯು ಪ್ರತಿದಿನ ಅಂದಾಜು ಒಂದು ಕೋಟಿ ಗೂ ಅಧಿಕ ನಷ್ಟ ಅನುಭವಿಸುತ್ತಿದೆ. ಅದಕ್ಕಾಗಿ ವಿದೇಶಿ ಬಂಡವಾಳದಿಂದ ಬಿಎಂಟಿಸಿಯ ಚಾಲಕ ಹಾಗೂ ನಿರ್ವಾಹಕರನ್ನೇ ಬಳಸಿಕೊಂಡು ಖಾಸಗಿ ಸಂಸ್ಥೆಗಳು ವಿದ್ಯುತ್ ಚಾಲಿತ ಬಸ್ಗಳನ್ನು ಸಂಚಾರಕ್ಕೆ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಳ ಮಾಡುವುದಿಲ್ಲ. ಹೆಚ್ಚುತ್ತಿರುವ ಡೀಸೆಲ್ ಬೆಲೆ, ನಿರ್ವಹಣಾ ವೆಚ್ಚ, ಆದಾಯ ಸೋರಿಕೆ ಸೇರಿ ಹಲವಾರು ಕಾರಣಗಳಿಂದ ಸಾರಿಗೆ ಸಂಸ್ಥೆಯು ಅಧಿಕ ನಷ್ಟವನ್ನು ಅನುಭವಿಸುತ್ತಿದೆ. ಆದರೂ, ಬಸ್ ಪ್ರಯಾಣ ದರವನ್ನು ನಾವು ಏರಿಕೆ ಮಾಡಿಲ್ಲ. ಅಲ್ಲದೆ, ಸದ್ಯ ಟಿಕೆಟ್ ದರ ಹೆಚ್ಚಳ ಮಾಡುವ ಯಾವ ಪ್ರಸ್ತಾಪವೂ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.