ಚಕ್ರ ಬಡ್ಡಿ, ಸಾಲಗಾರರಿಗೆ ಬೆದರಿಕೆ ಆರೋಪ: ಆರೋಪಿ ಬಂಧನ
ಬೆಂಗಳೂರು, ಜ.27: ಅನಧಿಕೃತವಾಗಿ ಬಡ್ಡಿ ವ್ಯವಹಾರ, ಹೆಚ್ಚಿನ ಹಣ ವಸೂಲಿ ಮಾತ್ರವಲ್ಲದೆ, ಸಾಲಗಾರರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದ ಗೋಲ್ಡ್ ನಾರಾಯಣ(47)ನನ್ನು ಇಲ್ಲಿನ ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
2017ರಲ್ಲಿ ನಾಗರಭಾವಿ ಮೂಲದ ಆರೋಪಿ ಗೋಲ್ಡ್ ನಾರಾಯಣ ಬಳಿ, ಅನಂತನಾರಾಯಣ ಎಂಬುವರು ಶೇಕಡ 5ರಷ್ಟು ಬಡ್ಡಿಯಂತೆ ಒಟ್ಟು 55 ಲಕ್ಷ ರೂ.ನಗದು ಸಾಲವಾಗಿ ಪಡೆದಿದ್ದರು. ಆದರೆ, ಇತ್ತೀಚಿಗೆ ಖಾಯಿಲೆಗೆ ತುತ್ತಾಗಿ, ಆರು ತಿಂಗಳಿನಿಂದ ಬಡ್ಡಿ ಪಾವತಿ ಮಾಡಿರಲಿಲ್ಲ. ಇದರಿಂದ, ಅಸಮಾಧಾನಗೊಂಡ ಗೋಲ್ಡ್ ನಾರಾಯಣ, ಅನಂತನಾರಾಯಣ ಅವರನ್ನು ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಅನ್ನಫೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ, ತನಿಖೆಗೆ ಆದೇಶಲಾಗಿತ್ತು.
ದೂರಿನ್ವಯ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿ ಗೋಲ್ಡ್ ನಾರಾಯಣನನ್ನು ಬಂಧಿಸಿ, ಮನೆಯಲ್ಲಿದ್ದ ನಿವೇಶನ ಪತ್ರಗಳು, ಹಲವು ಬ್ಯಾಂಕ್ಗಳ ಖಾಲಿ ಚೆಕ್ಕುಗಳು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.