ಮಾದಕ ವಸ್ತು ಮಾರಾಟ ಆರೋಪ: ಇಬ್ಬರ ಸೆರೆ
ಬೆಂಗಳೂರು, ಫೆ.5: ಹೊರ ರಾಜ್ಯಗಳಿಂದ ಮಾದಕ ವಸ್ತು ಗಾಂಜಾ ಹಾಗೂ ಆಶಿಷ್ ಆಯಿಲ್ ತಂದು, ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಹೊರಮಾವು ಕೆ.ಚನ್ನಸಂದ್ರ ನಿವಾಸಿ ಸಿಂಟೋಥಾಮಸ್ (35), ಮರಿಯಣ್ಣನ ಪಾಳ್ಯದ ತಾಝುದ್ದೀನ್ ತಲಾತ್ (29) ಬಂಧಿತ ಆರೋಪಿಗಳೆಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಆಂಧ್ರಪ್ರದೇಶ ಮೂಲದ ಸೆಂಥಿಲ್ ಎಂಬಾತನಿಂದ ಆರೋಪಿಗಳು ಮಾದಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದ್ದು, ಆತನ ಬಂಧನಕ್ಕೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 40 ಲಕ್ಷ ಮೌಲ್ಯದ 4,500 ಗ್ರಾಂ ಆಶಿಷ್ ಆಯಿಲ್, 22 ಕೆಜಿ ಗಾಂಜಾ, 2 ಮೊಬೈಲ್, ತೂಕದ ಯಂತ್ರ, 9,300 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story