ದಿಲ್ಲಿಯಲ್ಲಿ ಭರ್ಜರಿ ಗೆಲುವು: ಬೆಂಗಳೂರಿನಲ್ಲಿ ಆಪ್ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮಾಚರಣೆ
ಬೆಂಗಳೂರು,ಫೆ. 11: ಹೊಸದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಆಪ್) ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಪ್ ಕಾರ್ಯಕರ್ತರು ಸಿಹಿ ಹಂಚಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸಿದರು.
ಮಂಗಳವಾರ ಪಕ್ಷ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಇದು ಕೇವಲ ಚುನಾವಣಾ ಫಲಿತಾಂಶವಷ್ಟೇ ಅಲ್ಲ, ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಮಾಡಿರುವ ಅಭಿವೃದ್ಧಿ ಕಾರ್ಯಗಳ ಫಲಿತಾಂಶವೂ ಹೌದು ಎಂದರು.
ಜನರು ಪಕ್ಷದ ಮೇಲೆ ಹೆಚ್ಚಿನ ಭರವಸೆ ಮತ್ತು ನಂಬಿಕೆಯನ್ನು ಇಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಜನರ ನಂಬಿಕೆಯನ್ನು ಗಟ್ಟಿಗೊಳಿಸಿ, ಹೊಸ ಭರವಸೆಯನ್ನು ಮೂಡಿಸಲು ನಾವೆಲ್ಲರೂ ಮತ್ತಷ್ಟು ಕಠಿಬದ್ದರಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಉತ್ಸಾಹದಿಂದ ಪಕ್ಷವನ್ನು ಸಂಘಟಿಸಲು ಕಾರ್ಯಪ್ರವೃತ್ತರಾಗಬೇಕು. ಜನ ಸಾಮಾನ್ಯರು ನಮ್ಮೊಂದಿಗಿದ್ದಾರೆ. ‘ಇಂದು ದೆಹಲಿಯಲ್ಲಿ-ನಾಳೆ ಇಲ್ಲಿ’ ನಮ್ಮ ಗೆಲುವು ಮುಂದುವರೆಯಲಿದೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು, ದೆಹಲಿ ಮಾದರಿಯ ಅಭಿವೃದ್ಧಿಯನ್ನು ಬೆಂಗಳೂರಿನಲ್ಲಿಯೂ ಸಾಧಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನಿ, ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಪ್ರಚಾರ ಉಸ್ತುವಾರಿ ಶಾಂತಲಾ ದಾಮ್ಲೆ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.