ರೌಡಿಶೀಟರ್ ಕೊಲೆ ಪ್ರಕರಣ: ಆರು ಆರೋಪಿಗಳ ಬಂಧನ
ಬೆಂಗಳೂರು, ಫೆ.15: ರೌಡಿಶೀಟರ್ ಪ್ರಭಾಕರ ಕೊಲೆ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಇಲ್ಲಿನ ಕಾಟನ್ಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ದೀಪಕ್(22), ಶರತ್(28), ಅಜಯ(22), ವಿನೋದ್(22), ಸುನಿಲ್(22) ಹಾಗೂ ಮಾಲಾ(43) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಾಟನ್ಪೇಟೆ ಬಳಿ ಕಳೆದ ಫೆ.11ರ ರಾತ್ರಿ 7:40ರ ವೇಳೆ ರೌಡಿ ಪ್ರಭಾಕರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಟನ್ಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ರೌಡಿ ಪ್ರಭಾಕರನು ಆರೋಪಿ ದೀಪಕ್ ಅವರ ಸಹೋದರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಆಕ್ರೋಶಗೊಂಡ ದೀಪಕ್, ಆರು ಮಂದಿಯ ಜತೆ ಸೇರಿ ಸಂಚು ರೂಪಿಸಿ ರೌಡಿ ಪ್ರಭಾಕರನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story