ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಕ್ವಾರಂಟೈನ್ ಆಗಿ ಬಳಕೆ: ಡಿಸಿಎಂ ಗೋವಿಂದ ಕಾರಜೋಳ ಸೂಚನೆ
ಬೆಂಗಳೂರು, ಮಾ.27: ಮಾರಕ ಕೊರೋನ ವೈರಸ್ ನಿಯಂತ್ರಣಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುವ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಈಗಾಗಲೇ ರಜೆ ನೀಡಲಾಗಿದೆ. ವಸತಿ ಶಾಲೆಯ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಇರುವುದರಿಂದ ವಸತಿ ಶಾಲೆ ಬಳಸಿಕೊಳ್ಳಲು ಯಾವ ತೊಂದರೆಯೂ ಇರುವುದಿಲ್ಲ. ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿರುವ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳು ಅಗತ್ಯ ಮೂಲಸೌಕರ್ಯ ಹೊಂದಿವೆ. ಬಹಳಷ್ಟು ವಸತಿ ಶಾಲೆಗಳು ಊರಿನಿಂದ ಹೊರಗಿವೆ. ಅಲ್ಲದೆ ವಿಶಾಲವಾದ ಸ್ಥಳದಲ್ಲಿ ಸುಸಜ್ಜಿತವಾಗಿದ್ದು, ಪ್ರತ್ಯೇಕ ಕೊಠಡಿಗಳು , ಶೌಚಾಲಯ, ಸ್ನಾನಗೃಹ ಒಳಗೊಂಡಿವೆ. ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳು ಜನ ಸಂದಣಿಯಿಂದ ದೂರದ ಪ್ರದೇಶಗಳಲ್ಲಿವೆ. ಹೀಗಾಗಿ ಯಾವುದೇ ವೆಚ್ಚವಿಲ್ಲದೆ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಗಳನ್ನಾಗಿ ಪರಿವರ್ತಿಸಬಹುದಾಗಿದೆ. ಜಿಲ್ಲಾಡಳಿತವು ಮುಕ್ತವಾಗಿ ಬಳಸಿಕೊಳ್ಳಬೇಕೆಂದು ಕಾರಜೋಳ ತಿಳಿಸಿದ್ದಾರೆ.