ಕೊರೋನ ಸೋಂಕು ಹಳ್ಳಿಗಳಿಗೆ ಹೋಗದಂತೆ ತಡೆಗಟ್ಟಬೇಕು: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ. 29: ರಾಜ್ಯದಲ್ಲಿ ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಕೊರೋನ ವೈರಸ್ ಸೋಂಕು ಹಳ್ಳಿಗಳಿಗೆ ಹೋಗದಂತೆ ತಡೆಗಟ್ಟಲು ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂದಿಲ್ಲಿ ಮನವಿ ಮಾಡಿದ್ದಾರೆ.
ರವಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ತಪ್ಪಿನಿಂದ ಯಾವ ನ್ಯೂನತೆ ಆಗದಂತೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ಬಂದವರು ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಸರಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ ಎಂದು ದೂರಿದರು.
23 ಸಾವಿರ ಮಂದಿ ಪೈಕಿ 4500 ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರಕಾರ ಹೇಳಿದ್ದು, ಅವರೆಲ್ಲರನ್ನೂ ಸರಕಾರ ಕೂಡಲೇ ಪತ್ತೆ ಮಾಡಬೇಕು. ಮೂರನೇ ಹಂತಕ್ಕೆ ಸೋಂಕು ಇನ್ನೂ ಹೋಗಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ, ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದ್ದು, ಆತನಿಗೆ ವಿದೇಶದಿಂದ ಬಂದವರ ಸಂಪರ್ಕ ಇರಲಿಲ್ಲ. ಆದರೆ, ಆತನಿಗೆ ಸೋಂಕು ಹರಡಿದ್ದು ಹೇಗೆ ಎಂದು ಪತ್ತೆ ಮಾಡಬೇಕು. ಶಿರಾದಲ್ಲಿಯೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಈ ಇಬ್ಬರಿಗೂ ಸೋಂಕು ಯಾವ ಹಂತದಲ್ಲಿತ್ತು ಎಂದು ಸ್ಪಷ್ಟಣೆ ನೀಡಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.
ಮಾಸ್ಕ್, ಸ್ಯಾನಿಟೈಸರ್, ಪಿಪಿಇ, ಟೆಸ್ಟಿಂಗ್ ಕಿಟ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಬಂದಿರುವುದು ಗುಣಮಟ್ಟದಲ್ಲ ಎಂಬ ಆರೋಪಗಳಿವೆ. ಈಗ ದಾಸ್ತಾನು ಮಾಡಿರುವುದು ಯಾವುದಕ್ಕೂ ಸಾಲುವುದಿಲ್ಲ. ಸೋಂಕು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ತಯಾರಿಕೆ ಕೆಲಸ ಭರದಿಂದ ಸಾಗಬೇಕಿದೆ. ಸಿದ್ಧ ಉಡುಪು ಕಾರ್ಖಾನೆಗಳಿಗೆ ಕೂಡಲೇ ಮಾಸ್ಕ್ ತಯಾರಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ರಾಜ್ಯದ 6,020 ಪಂಚಾಯಿತಿಗಳಲ್ಲಿ ಪ್ರತಿ ಪಂಚಾಯಿತಿಗೆ ಒಬ್ಬ ವೈದ್ಯಕೀಯ ಅಧಿಕಾರಿ ನೇಮಕ ಮಾಡಬೇಕು. ಆಹಾರ ಮತ್ತು ಕೃಷಿ, ಮಾರುಕಟ್ಟೆ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ. ಅದೇ ರೀತಿ ರೈತರ ಹಿತವನ್ನು ಕಾಯಬೇಕು. ಎಪ್ರಿಲ್, ಮೇನಲ್ಲಿ ಮುಂಗಾರು ಪೂರ್ವ ಬಿತ್ತನೆ ಆರಂಭವಾಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸಮರ್ಪಕವಾಗಿ ಆಗಬೇಕು ಎಂದು ಸೂಚಿಸಿದರು.
ಬೆಂಗಳೂರು ನಗರದಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೊರ ರಾಜ್ಯಗಳಲ್ಲಿ ಇದ್ದ ನಮ್ಮವರು ಮತ್ತು ರಾಜ್ಯದ ಜನರು ಹೊರ ರಾಜ್ಯಗಳಲ್ಲಿದ್ದು ಅವರನ್ನು ಸುರಕ್ಷಿತವಾಗಿ ರಾಜ್ಯಗಳಿಗೆ ಕರೆತರಬೇಕು ಮತ್ತು ಇಲ್ಲಿರುವವರನ್ನು ಆಯಾಯ ರಾಜ್ಯಗಳಿಗೆ ಕಳುಹಿಸಬೇಕು ಎಂದು ಅವರು ತಿಳಿಸಿದರು.
ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಒಳ್ಳೆಯದು. ಪೊಲೀಸರಿಗೆ ಪ್ರಾಣ ಸಂಕಟ. ಲಾಠಿ ಪ್ರಹಾರ ಸಲ್ಲ. ಅಮಾಯಕರ ಮೇಲೆ ಬಲ ಪ್ರಯೋಗ ಸಲ್ಲ. ಪೌರ ಕಾರ್ಮಿಕರು ಸೇರಿ ಪೊಲೀಸರಿಗೂ ವಿಮೆ ನೀಡುವ ಸಂಬಂಧ ಪ್ರಧಾನಿ ಜತೆ ಸಿಎಂ ಸಮಾಲೋಚನೆ ನಡೆಸಬೇಕು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಮುಖ್ಯಮಂತ್ರಿಗೆ ಸಲಹೆ ನೀಡಿದರು.
ಮುಂದಿನ ಎರಡು ವಾರ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಹೀಗಾಗಿ ಕೊರೋನ ಸೋಂಕು ಹರಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಈಗಾಗಲೇ ದೇಶ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಸರಕಾರ ಜಾರಿಗೆ ತರಬೇಕು.
-ಸಿದ್ದರಾಮಯ್ಯ ವಿಪಕ್ಷ ನಾಯಕ