ಮುಂಬಯಿ ಕನ್ನಡಿಗರಿಗೆ 500 ದಿನಸಿ ಕಿಟ್ ತಲುಪಿಸಿದ ಡಾ.ಅಶ್ವತ್ಥನಾರಾಯಣ
ಬೆಂಗಳೂರು, ಮೇ 24: ಮುಂಬಯಿನ ಧಾರಾವಿ ಕೊಳಗೇರಿಯಲ್ಲಿರುವ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅವರಿಗೆ 500 ದಿನಸಿ ಕಿಟ್ಗಳನ್ನು ತಲುಪಿಸಿದ್ದಾರೆ.
ಕೊವಿಡ್ ಲಾಕ್ಡೌನ್ನಿಂದಾಗಿ ಮುಂಬಯಿನ ಧಾರಾವಿ ಪ್ರದೇಶದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಡಾ. ಅಶ್ವತ್ಥನಾರಾಯಣ, ತಮ್ಮ ಸಹಾಯಹಸ್ತ ಚಾಚಿದ್ದಾರೆ.
ದಿನಸಿ ಪದಾರ್ಥಗಳಿರುವ 500 ಕಿಟ್ಗಳನ್ನು ಮುಂಬಯಿಗೆ ತಲುಪಿಸಿದ್ದಾರೆ. ಸ್ಥಳೀಯ ಮುಂಖಡರು ಆ ಕಿಟ್ಗಳನ್ನು ಭಾನುವಾರ ಸಂತ್ರಸ್ತರಿಗೆ ವಿತರಿಸಿದರು. ಕಿಟ್ ಪಡೆದ ಸಂತ್ರಸ್ತರು ವೀಡಿಯೋ ಮೂಲಕ ಉಪಮುಖ್ಯಮಂತ್ರಿಯವರಿಗೆ ಧನ್ಯವಾದ ಹೇಳಿದ್ದಾರೆ.
"ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು, ಸಂಪಾದನೆ ಇಲ್ಲದೆ ದಿನಸಿ ಖರೀದಿಯೂ ಕಷ್ಟವಾಗಿದ್ದ ಸಮಯದಲ್ಲಿ ನಮಗೆ ಕಿಟ್ ತಲುಪಿಸಿದ್ದಾರೆ. ಹೊರ ರಾಜ್ಯದಲ್ಲಿರುವ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿರುವ ಡಾ. ಅಶ್ವತ್ಥನಾರಾಯಣ ಅವರಿಗೆ ವಂದನೆಗಳು," ಎಂದು ಕಿಟ್ ಪಡೆದ ಧಾರಾವಿಯ ನಿವಾಸಿಗಳು ತಿಳಿಸಿದ್ದಾರೆ.