ಚಿನ್ನದ ಗಟ್ಟಿ ಕಳವು ಆರೋಪಿ ಬಂಧನ: 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.13: ಚಿನ್ನಾಭರಣ ತಯಾರಿಕೆ ವೇಳೆ ಚಿನ್ನದ ಗಟ್ಟಿಯನ್ನು ಕಳವು ಮಾಡಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿರುವ ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು, 1 ಕೆಜಿ 16 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ರಸ್ತೆಯ ಕಸ್ತೂರಬಾ ನಗರದ ಉತ್ತಮ್ ದೊಲಾಯ್(37) ಬಂಧಿತ ಆರೋಪಿ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಆರೋಪಿಯು ಕಬ್ಬನ್ಪೇಟೆಯ ಚಿನ್ನಾಭರಣಗಳ ಸಗಟು ವ್ಯಾಪಾರ ಮಾಡುತ್ತಿದ್ದ ಎಸ್ಕೆ ಜ್ಯುವೆಲರ್ಸ್ ನಲ್ಲಿ ಆಭರಣಗಳನ್ನು ಮಾಡಲು ಚಿನ್ನದ ಗಟ್ಟಿಯನ್ನು ಪಡೆದುಕೊಂಡು ಅದರಲ್ಲಿ ಸ್ವಲ್ಪ ಭಾಗವನ್ನು ಮಾಲಕರಿಗೆ ಗೊತ್ತಾಗದಂತೆ ಕಳವು ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಮೂರು ವರ್ಷಗಳಿಂದ ಎಸ್.ಕೆ. ಜ್ಯೂಯಲರ್ಸ್ನಿಂದ ಚಿನ್ನದ ಗಟ್ಟಿಯನ್ನು ಪಡೆದುಕೊಂಡು ಹೋಗಿ ಚಿನ್ನಾಭರಣಗಳನ್ನು ಮಾಡುತ್ತಿದ್ದು, ಅಂಗಡಿ ಮಾಲಕರಿಗೆ ಗೊತ್ತಾಗದಂತೆ ಕಳ್ಳತನ ಮಾಡುತ್ತಿದ್ದ. ಜೂ.8 ರಂದು ಕಂಠೀರವ ಸ್ಟುಡಿಯೋ ಮುಖ್ಯರಸ್ತೆ ಬಳಿ ಆರೋಪಿಯು ಜ್ಯುವೆಲರಿ ಶಾಪ್ಗಳ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಡಿಸಿಪಿ ತಿಳಿಸಿದರು.
ಬಂಧಿತ ಆರೋಪಿಯಿಂದ 45 ಲಕ್ಷ 6,500 ರೂ. ಮೌಲ್ಯದ 1 ಕೆಜಿ 16 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.