ಭಾರತ-ಚೀನಾ ಗಡಿಯ ವಾಸ್ತವ ಸ್ಥಿತಿ ಪ್ರಧಾನಿ ಜನತೆಯ ಮುಂದಿಡಲಿ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಜು.5: ಭಾರತ-ಚೀನಾ ಗಡಿಯಲ್ಲಿ ಜೂ.15ರಂದು ಏನು ನಡೆಯಿತು ಎನ್ನುವುದರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ವಿವರಿಸಬೇಕಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಿತಾಸಕ್ತಿಗಾಗಿ ಪ್ರತಿಪಕ್ಷಗಳು ಏನೇ ಹೇಳಿಕೆ ಕೊಟ್ಟರೂ ದೇಶದ್ರೋಹವೆಂಬಂತೆ ಬಿಂಬಿಸಲಾಗುತ್ತದೆ. ಹೀಗಾಗಿ ದೇಶದ ಗಡಿ ಪ್ರದೇಶವಾದ ಲೇಹ್ಗೆ ಪ್ರಧಾನಿ ಮೋದಿ ಹೋಗಿ ಬಂದಿದ್ದು, ಅಲ್ಲಿನ ವಸ್ತುಸ್ಥಿತಿಯನ್ನು ಜನತೆಗೆ ತಿಳಿಸಬೇಕೆಂದರು.
ದೇಶದ ಹಿತವೇ ಮುಖ್ಯ: ಭಾರತ ಸದಾ ಒಗ್ಗಟ್ಟಾಗಿರಬೇಕು. ನಮ್ಮ ಸೈನಿಕರಿಗೆ ಮತ್ತಷ್ಟು ಬಲ ತುಂಬಬೇಕು. ಆ ಮೂಲಕ ನಮ್ಮ ಗಡಿಯ ಒಂದು ಅಡಿ ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಬಾರದು. ಅದಕ್ಕಾಗಿ, ದೇಶದ ಹಿತಕ್ಕಾಗಿ ಕಾಂಗ್ರೆಸ್ನ ಬೆಂಬಲ ಸದಾ ಇರುತ್ತದೆ. ಆದರೆ, ಪ್ರಧಾನಿ ಮೋದಿ ಏನು ಮಾಡುತ್ತಾರೆಂಬುದು ಅವರ ಸಚಿವ ಸಂಪುಟದ ಸಹದ್ಯೋಗಿಗಳಿಗೇ ಗೊತ್ತಿಲ್ಲವೆಂದು ಖರ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.