ಶಾಸಕನಾದರೂ ಬಿಜೆಪಿ ಆಡಳಿತಾವಧಿಯಲ್ಲಿ ಅಸಹಾಯಕನಾಗಿದ್ದೇನೆ: ಕಂಪ್ಲಿ ಗಣೇಶ್
ಬಳ್ಳಾರಿ, ಆ. 2: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾದ ಮೇಲೆ ನನ್ನ ಕ್ಷೇತ್ರದಲ್ಲಿ ಅಧಿಕಾರದ ದುರುಪಯೋಗ ಹೆಚ್ಚಾಗುತ್ತಿದ್ದು, ನಾನು ಅಸಹಾಯಕನಾಗಿದ್ದೇನೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಪ್ಲಿಯ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಐದು ಎಕರೆ ಪ್ರದೇಶದಲ್ಲಿ ಇಸ್ಟೀಟ್ ಅಡ್ಡೆಗಳು ಪ್ರಾರಂಭವಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಕುರುಗೋಡು ಭಾಗದಲ್ಲಿ ಜಾತ್ರೆಗಳಿಗೆ ಹಾಕುವ ರೀತಿಯಲ್ಲಿ ಶೆಡ್ಗಳನ್ನು ಹಾಕಿಕೊಂಡು ಇಸ್ಟೀಟ್ ಆಡುತ್ತಿದ್ದಾರೆ. ಈ ಬಗ್ಗೆ ಎಸ್ಪಿ ಸಿ.ಕೆ.ಬಾಬಾ ಗಮನಕ್ಕೆ ತಂದಿದ್ದೇನೆಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಇಸ್ಟೀಟ್ ಅಡ್ಡೆಗಳು ಇರಲಿಲ್ಲ. ಬಿಜೆಪಿ ಸರಕಾರ ಬಂದಾಗಿನಿಂದ ಈ ರೀತಿಯ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿವೆ. ಈ ಇಸ್ಪೀಟ್ ಅಡ್ಡೆಗಳ ಹಿಂದೆ ಬಿಜೆಪಿಯ ಪ್ರಭಾವಿ ನಾಯಕರು ಇದ್ದಾರೆ. ಈ ಅಡ್ಡೆಗಳನ್ನು ತೆರೆಯಲು ಅನುಮತಿ ಕೊಟ್ಟವರು ಯಾರೆಂದು ಅವರು ಪ್ರಶ್ನಿಸಿದ್ದಾರೆ.