ಬೆಂಗಳೂರಿನ ಕಾವಲ್ ಭೈರಸಂದ್ರ ಉದ್ವಿಗ್ನ: ಪೊಲೀಸ್ ಠಾಣೆಗಳಿಗೆ ಕಲ್ಲು ತೂರಾಟ
ಬೆಂಗಳೂರು, ಆ.11: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿಕರೊಬ್ಬರು ಫೇಸ್ಬುಕ್ನಲ್ಲಿ ಕೋಮು ಪ್ರಚೋದಕ, ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ಪೊಲೀಸ್ ಠಾಣೆಗೂ ಕಲ್ಲೆಸೆದಿದ್ದಾರೆ ಎಂದು ವರದಿಯಾಗಿದೆ.
ಶಾಸಕರ ಕಾವಲ್ ಭೈರಸಂದ್ರದ ನಿವಾಸಕ್ಕೆ ಕಲ್ಲು ತೂರಾಟ ಮಾಡಿದ್ದು, ಘಟನಾ ಸ್ಥಳದಲ್ಲಿ ನೂರಾರು ಪೊಲೀಸರು ಜಮಾಯಿಸಿದ್ದಾರೆ. ಆದರೆ ಪೊಲೀಸರ ಮೇಲೆಯೇ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ದುಷ್ಕರ್ಮಿಗಳು ಪೊಲೀಸ್ ಠಾಣೆಯ ಮುಂಭಾಗ ದಾಂಧಲೆ ನಡೆಸಿ, ವಾಹನಗಳನ್ನು ಪುಡಿಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಿಡಿಗೇಡಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.