“ಬಿಜೆಪಿ ಹೈಕಮಾಂಡ್ಗೆ ಕಪ್ಪ’’ ಬಿಎಸ್ವೈ-ಅನಂತ್ ಚರ್ಚೆ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು, ಫೆ.13: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ಹೈಕಮಾಂಡ್ಗೆ ಕಪ್ಪ ನೀಡಿರುವ ವಿಚಾರವನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ಕುಮಾರ್ ತಮ್ಮ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದು, ಈ ವಿಚಾರವನ್ನು ಸುಪ್ರೀಂಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಸೋಮವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಹೈಕಮಾಂಡ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 1 ಸಾವಿರ ಕೋಟಿ ರೂ. ಕಪ್ಪ ನೀಡಿದ್ದಾರೆ ಎಂದು ಆರೋಪ ಮಾಡಿರುವ ಯಡಿಯೂರಪ್ಪ 24 ಗಂಟೆಯೊಳಗೆ ರಾಜ್ಯದ ಜನತೆಯ ಮುಂದೆ ದಾಖಲೆಗಳನ್ನಿಡಬೇಕು ಎಂದು ಆಗ್ರಹಿಸಿದರು.
ಆದಾಯ ತೆರಿಗೆ ಹಾಗೂ ಜಾರಿನಿರ್ದೇಶನಾಲಯದ ಮಾಹಿತಿಗಳು ಹೇಗೆ ಸೋರಿಕೆಯಾಗುತ್ತಿವೆ. ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೋ ಅಥವಾ ಈ ಇಲಾಖೆಯು ಬಿಜೆಪಿ ಪಕ್ಷದ ಒಂದು ಅಂಗವೋ ಎಂಬುದು ಗೊತ್ತಾಗುತ್ತಿಲ್ಲ. ಭ್ರಷ್ಟಾಚಾರ, ನೋಟುಗಳ ಅಮಾನ್ಯೀಕರಣ, ಕಪ್ಪುಹಣದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರಮೋದಿ, ಸಮಯ ವ್ಯರ್ಥಮಾಡದೆ, ಈ ಪ್ರಕರಣವನ್ನು ಸುಪ್ರೀಂಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಸರಕಾರದ ಅಧಿಕಾರವಧಿಯಲ್ಲಿ ಅಕ್ರಮ ಗಣಿಗಾರಿಕೆ, ಬಿಡಿಎ, ಕೆಐಎಡಿಬಿಯಿಂದ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ಲೂಟಿ ಹೊಡೆದಿದ್ದು, ಅದರಲ್ಲಿ ಬಿಜೆಪಿ ಹೈಕಮಾಂಡ್ಗೆ ಕಪ್ಪ ಹೋಗಿದೆಯೆ ಎಂಬುದು ಗೊತ್ತಾಗಬೇಕು. ರಾಜ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಕಪ್ಪವನ್ನು ಹೈಕಮಾಂಡ್ಗೆ ಸಲ್ಲಿಕೆಯಾಗಿಲ್ಲ ಎಂದು ಎಂದು ಉಗ್ರಪ್ಪ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ಗೆ 1 ಸಾವಿರ ಕೋಟಿ ರೂ.ಕಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಧಿಕಾರವಿಲ್ಲದೆ ಹತಾಶರಾಗಿರುವ ಅವರು, ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.
ಯಡಿಯೂರಪ್ಪ ಇತಿಹಾಸ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ನಡೆದಂತಹ ಭ್ರಷ್ಟಾಚಾರ, ಸಂಪುಟ ಸಹೋದ್ಯೋಗಿಗಳಿಂದ ನಡೆದಂತಹ ಅನಾಚಾರ, ಅತ್ಯಾಚಾರಗಳನ್ನು ಯಾರೂ ಮರೆತಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋದಂತಹ ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಅವರು ಟೀಕಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರಕಾರವು ಕಳೆದ ಮೂರುವರೆ ವರ್ಷಗಳಿಂದ ಜನಪರವಾದ ಆಡಳಿತ ನೀಡುತ್ತಿದ್ದಾರೆ. ಸರಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳದೆ ಯಡಿಯೂರಪ್ಪ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸ್ವತಃ ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವವರು ಮತ್ತೊಬ್ಬರ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡಲು ಯಾವ ನೈತಿಕತೆಯಿದೆ ಎಂದು ಬಸವರಾಜರಾಯರಡ್ಡಿ ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿ ಡೈರಿ ವಶಕ್ಕೆ ಪಡೆದಿರುವುದು, ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಕಮಿಷನ್ ಪಡೆಯಲಾಗಿದೆ ಎಂದು ಯಡಿಯೂರಪ್ಪ ಆರೋಪಿಸುವ ಬದಲು, ಈ ಸಂಬಂಧ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗುವ ದಾಖಲೆಗಳ ಕುರಿತು ಸಂಬಂಧಪಟ್ಟ ವ್ಯಕ್ತಿಯನ್ನು ಹೊರತುಪಡಿಸಿ ಮೂರನೆಯವರಿಗೆ ಅದರ ಮಾಹಿತಿ ನೀಡುವುದು ಕಾನೂನು ಬಾಹಿರ. ಯಡಿಯೂರಪ್ಪ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ಕುಮಾರ್ ಮಾತನಾಡಿ, ಯಡಿಯೂರಪ್ಪ ಸ್ವತಃ ಭ್ರಷ್ಟಾಚಾರದ ಆರೋಪವನ್ನು ಹೊತ್ತು ಜೈಲಿಗೆ ಹೋಗಿ ಅನುಭವಿಸಿರುವ ನೋವನ್ನು ಮತ್ತೊಬ್ಬರಿಗೆ ನೀಡುವುದು ಎಷ್ಟು ಸಮಂಜಸ. ರಾಜಕೀಯ ಕಾರಣಕ್ಕಾಗಿ ಒಬ್ಬರ ತೇಜೋವಧೆ ಮಾಡುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಭೂಷಣವಲ್ಲ. ಹೈಕಮಾಂಡ್ಗೆ ಕಪ್ಪ ನೀಡಿರುವುದು ಸಾಬೀತಾದರೆ ಸಿದ್ದರಾಮಯ್ಯ ಒಂದು ಕ್ಷಣವು ಅಧಿಕಾರದಲ್ಲಿ ಇರುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿಯಲ್ಲಿ ರವಿವಾರ ನಡೆದಂತಹ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭಾಷಣ ಮಾಡುತ್ತಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ಕುಮಾರ್ ನಡುವೆ ನಡೆದಿರುವ ಸಂಭಾಷಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ಗೆ ಕಪ್ಪ ನೀಡಿರುವ ವಿಚಾರವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾದ ಸಿಡಿಯನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆಗೊಳಿಸಿದರು.
ಸಂಭಾಷಣೆಯಲ್ಲಿ ಏನಿದೇ ?:
ಅನಂತ್ಕುಮಾರ್: ಅವರು ಕೊಟ್ಟಿದ್ದಾರೆ. ನಾನೂ ಕೊಟ್ಟಿದ್ದೀನಿ ಅಂದ ಹಾಗೆ ಆಯ್ತು ಮುಖ್ಯಮಂತ್ರಿದು.
ಯಡಿಯೂರಪ್ಪ: ನಗು
ಅನಂತ್ಕುಮಾರ್: ನೀವು(ಯಡಿಯೂರಪ್ಪ) ಹೈಕಮಾಂಡ್ಗೆ ಕೊಟ್ಟಿದ್ದೀರಿ, ನಾನೂ ಕೊಟ್ಟಿದ್ದೀನಿ. ಆದರೆ, ಸಾವಿರ ಕೋಟಿ ಎಲ್ಲ ಕೊಟ್ಟಿಲ್ಲ ಅಂತೆ(ಇಬ್ಬರೂ ಜೋರಾಗಿ ನಗು). ನೀವು ಆಗ ಕೊಟ್ಟಿದ್ರಲ್ಲ , ಅದಕ್ಕೆ ಇವರೂ ಕೊಡ್ತಾ ಇದ್ದಾರಂತೆ.
ಅನಂತ್ಕುಮಾರ್: ಅಂದ್ರೆ ಕೊಟ್ಟಿರೋದನ್ನು ಒಪ್ಪಿಕೊಂಡಂತಾಯಿತಲ್ಲ.
ಯಡಿಯೂರಪ್ಪ: ಆದರೆ, ಕೊಟ್ಟಿರೋದನ್ನು ಯಾರಾದರೂ ಬರೆದುಕೊಂಡಿರುತ್ತಾರಾ.
ಅನಂತ್ಕುಮಾರ್: ನಗು.