ಮೇ. 10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ
ಬೆಂಗಳೂರು, ಎ. 5: ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬುಧವಾರ(ಎ.5)ದಿಂದ ರಾಜ್ಯದ 48 ಕೇಂದ್ರಗಳಲ್ಲಿ ಆರಂಭವಾಗಿದ್ದು, ಪರೀಕ್ಷಾ ಮಂಡಳಿ ವೌಲ್ಯಮಾಪನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಮಂಗಳೂರು, ದಾವಣಗೆರೆ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಈ ಬಾರಿ 21 ಸಾವಿರ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಿದ್ದು, 15 ದಿನಗಳ ಕಾಲ ಮೌಲ್ಯಮಾಪನ ನಡೆಯಲಿದೆ. ವೌಲ್ಯಮಾಪನ ಪ್ರಕ್ರಿಯೆಯು ಸುಸೂತ್ರವಾಗಿ ನಡೆದರೆ ಮುಂದಿನ ಮೇ.10 ಕ್ಕೆ ಫಲಿತಾಂಶ ಪ್ರಕಟಿಸಲು ಮಂಡಳಿ ತೀರ್ಮಾನಿಸಿದೆ.
ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಹೇಳಿದ್ದರು. ಅಲ್ಲದೆ, ಒಂದು ದಿನದ ಪ್ರತಿಭಟನೆ ನಡೆಸಿದ್ದ ಉಪನ್ಯಾಸಕರು, ಪರೀಕ್ಷೆ ವೇಳೆ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಸರಕಾರದ ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ವೌಲ್ಯಮಾಪನ ಬಹಿಷ್ಕಾರ ಕೈ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಪರೀಕ್ಷೆಯಲ್ಲಿ ಆರೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು, 37 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಆರಂಭವಾದ 8 ದಿನದೊಳಗೆ ಶೇ.75ರಷ್ಟು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. 12 ದಿನದೊಳಗೆ ಸಂಪೂರ್ಣ ಮುಗಿುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಆನ್-ಲೈನ್ನಲ್ಲಿ ದೊರೆಯಲಿದೆ. ಸಿಇಟಿ ನಂತರ ಫಲಿತಾಂಶ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೇ 2 ಮತ್ತು 3ರಂದು ನಡೆಯಲಿದೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರೀಯಾ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ಮೇ 7ರಂದು ನಡೆಯಲಿದೆ. ಸಮಗ್ರ ವೌಲ್ಯಮಾಪನ ದೃಷ್ಟಿಯಿಂದ ಮೌಲ್ಯಮಾಪನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ ಮೌಲ್ಯಮಾಪಕರ ಮೇಲೆ ನಿಗಾ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.