ಕಾವ್ಯವನ್ನು ಜೀವನದ ಧ್ಯೇಯವಾಗಿ ಪರಿಗಣಿಸಿ: ಎಚ್.ಎಸ್.ವೆಂಕಟೇಶ್ ಮೂರ್ತಿ
‘ಪ್ರೀತಿ ಬೇಡುವ ಮಾತು’ ಕೃತಿ ಲೋಕಾರ್ಪಣೆ
ಬೆಂಗಳೂರು, ಎ.16: ಕಾವ್ಯ ಮಾಧ್ಯಮವನ್ನು ಗಂಭೀರವಾಗಿ ಬಳಸದೆ, ಜೀವನದ ಪರಮಧ್ಯೇಯವಾಗಿ ಬರೆದಾಗ ಮಾತ್ರ ಕಾವ್ಯ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ಹಿರಿಯ ಕಿವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕಾವ್ಯ ಮಂಡಳ ಮತ್ತು ಎಸ್ಎಲ್ಎನ್ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಆರ್.ವಿಜಯ ರಾಘವನ್ರ ಆಯ್ದ ಕವಿತೆಗಳ ‘ಪ್ರೀತಿ ಬೇಡುವ ಮಾತು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಕಾವ್ಯ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಳ್ಳುವಂತಹವರ ಕವಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹವರಿಂದ ಪರಿಪೂರ್ಣ ಲಯಬದ್ಧವಾದ ಕವಿತೆಗಳು ರಚನೆಯಾಗುವುದಿಲ್ಲ. ಕಾವ್ಯವನ್ನು ಜೀವನದ ಪರಮಧ್ಯೇಯವನ್ನಾಗಿ ಪರಿಗಣಿಸಿ ಬರೆದಾಗ ಮಾತ್ರ ಕಾವ್ಯ ಸಂಸ್ಕೃತಿ ಬೆಳೆಯುತ್ತದೆ ಎಂದು ವಿಶ್ಲೇಷಿಸಿದರು.
ಸಾಹಿತಿ ಡಾ.ಸುರೇಶ್ ನಾಗಲಮಡಿಕೆ ಮಾತನಾಡಿ, ಜೀವನದಲ್ಲಿ ಕಳೆದು ಹೋಗಿರುವ ಪ್ರೀತಿ, ಪ್ರೀತಿಯ ಮಾತನ್ನು ಕಾವ್ಯಗಳ ರೂಪದಲ್ಲಿ ಕವಿ ಸಂಗ್ರಹಿಸಿದ್ದಾರೆ. ಕಾವ್ಯಗಳಲ್ಲಿ ಎಲ್ಲಿಯೂ ಕಿರುಚಾಟವಿಲ್ಲದೆ ಕಲಾತ್ಮಕವಾಗಿ ಕವಿ ನಿರೂಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವಿ ಡಾ.ವಿಜಯ ರಾಘವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಪುಸ್ತಕ ಬಿಡುಗಡೆ ನಂತರ ಕವಿ ಡಾ.ವಿಜಯ ರಾಘವನ್ ಅವರ ಕಾವ್ಯ -ಸಾಹಿತ್ಯದ ಕುರಿತು ವಿಚಾರಗೋಷ್ಠಿ ಜರಗಿತು.