6 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಯ ಬಂಧನ
ಬೆಂಗಳೂರು, ಎ.24: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದಲ್ಲದೆ, ಪೆಟ್ಟಿಗೆಯಲ್ಲಿ ಶವವಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ಅನಿಲ್ ಎಂಬಾತನನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗಿರಿನಗರದ ಸಮೀಪದ ವೀರಭದ್ರನಗರದ ಅನಿಲ್(34) ಬಂಧಿತ ಆರೋಪಿಯಾಗಿದ್ದು, ಈತ ಕ್ರಷರ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯ ಮನೆಯ ಪಕ್ಕದ ಮನೆಯಲ್ಲಿಯೇ ವಾಸವಿದ್ದ ಕಲಬುರ್ಗಿ ಮೂಲದ ಆರೋಪಿ ಅನಿಲ್, ಎ.20ರಂದು ಸಂಜೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ತದನಂತರ ಈ ವಿಷಯ ಹೊರಗಡೆ ಗೊತ್ತಾಗಲಿದೆ ಎಂದು ಹೆದರಿ ಆಕೆಯನ್ನು ಕೊಲೆಗೈದು ಪೆಟ್ಟಿಗೆಯೊಂದರಲ್ಲಿಟ್ಟಿದ್ದಾನೆ. ಬಳಿಕ ಮನೆಗೆ ಬೀಗ ಹಾಕಿ ಯಾದಗಿರಿಯ ಶಹಾಪುರದಲ್ಲಿರುವ ಪತ್ನಿಯ ಬಳಿಗೆ ಹೋಗಿದ್ದ ಎಂದು ತಿಳಿದುಬಂದಿದೆ.
ಎಂಟು ವರ್ಷಗಳ ಹಿಂದೆ ಪತ್ನಿ ಸಮೇತ ನಗರಕ್ಕೆ ಬಂದಿದ್ದ ಅನಿಲ್, ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದ.
ಗಿರಿನಗರ ಪೊಲೀಸರ ವಿಶೇಷ ಪೊಲೀಸ್ ತಂಡ ಆರೋಪಿಯ ಪತ್ನಿಯನ್ನು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ವಿಚಾರಣೆ ನಡೆಸಿ ಮಾಹಿತಿ ಪಡೆದು ಬಳಿಕ ಅನಿಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಹೊಸಕೆರೆಯಿಂದ ವೀರಭದ್ರನಗರದಲ್ಲಿದ್ದ ಅಜ್ಜ ಪುಟ್ಟಸ್ವಾಮಿಯವರ ಮನೆಗೆ ಬಂದಿದ್ದ ಆರು ವರ್ಷದ ಬಾಲಕಿ ಎ.20ರ ಸಂಜೆ ಕಾಣೆಯಾಗಿದ್ದಳು. ಮನೆ ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದ ಪೋಷಕರು, ಮರುದಿನವೇ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರವಿವಾರ ರಾತ್ರಿ ಆರೋಪಿ ಅನಿಲ್ ಮನೆಯಲ್ಲಿ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು, ಬೀಗ ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು. ಆಗ ಕೊಠಡಿಯಲ್ಲಿದ್ದ ಪೆಟ್ಟಿಗೆಯಲ್ಲಿ ಬಾಲಕಿಯ ಶವವಿರುವುದು ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಕೈಗೊಂಡಿದ್ದರು.