ಸಿರಿಧಾನ್ಯಗಳು ಭವಿಷ್ಯದ ಭರವಸೆಯ ಬೆಳೆಗಳು: ಕೃಷ್ಣ ಭೈರೇಗೌಡ
ಬೆಂಗಳೂರು, ಎ.28: ನಾವು ಯಾವ ಧಾನ್ಯಗಳನ್ನು ತೃಣ ಮೂಲ ಧಾನ್ಯಗಳೆಂದು ಜರಿಯುತ್ತಿದ್ದೆವೋ, ಯಾವ ಧಾನ್ಯಗಳು ಬಡವರ ಆಹಾರ ಎಂದು ದೂರವಿಡುತ್ತಿದ್ದೆವೋ ಅವೇ ಈಗ ಭಾರತದ ‘ಭವಿಷ್ಯದ ಭರವಸೆಯ ಆಹಾರ ಪದ್ಧತಿ’ಯಾಗಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ರಾಜ್ಯ ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಾವಯವ -ಸಿರಿಧಾನ್ಯ ರಾಷ್ಟ್ರೀಯ ವಾಣಿಜ್ಯ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲೇ ಪ್ರಥಮ ಭಾರಿಗೆ ಕರ್ನಾಟಕದಲ್ಲಿ ಇಂತಹ ಮೇಳವನ್ನು ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಾವಯವ ಪದಾರ್ಥಗಳಿಗೆ ಭಾರೀ ಬೇಡಿಕೆ ಬಂದಿದೆ. ರಾಜ್ಯದಲ್ಲಿ 2004 ರಲ್ಲಿ ಸಾವಯವ ನೀತಿಯನ್ನು ಜಾರಿಗೆ ತರಲಾಗಿದೆ. ಆಗ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈಗ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಮತ್ತು ಸಿರಿಧಾನ್ಯ ಗಳನ್ನು ಬೆಳೆಯಲಾಗುತ್ತಿದೆ ಎಂದರು.
ಸಾವಯವ ಭಾಗ್ಯ ಮತ್ತು ಕೇಂದ್ರದ ಪರಂಪರಾಗತ ಕೃಷಿ ವಿಕಾಶ ಯೋಜನೆಯಡಿ ಹೆಚ್ಚುವರಿಯಾಗಿ 90 ಸಾವಿರ ಹೆಕ್ಟೇರ್ ಪ್ರದೇಶವನ್ನು ಸಾಮಾನ್ಯಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತಿಸಲಾಗಿದೆ. ರೈತರು ಬೆಳೆದ ಸಾವಯವ ಪದಾರ್ಥಗಳಿಗೆ ಮಾರುಕಟ್ಟೆ ಕಲ್ಪಿಸಲು ರಾಜ್ಯ ಸರಕಾರ ಸಾವಯವ ಬೆಳೆಯುವ ರೈತರನ್ನು ಒಂದುಗೂಡಿಸಿ 14 ಸಾವಿರ ಸಾವಯವ ಒಕ್ಕೂಟಗಳನ್ನು ರಚನೆ ಮಾಡಿದೆ. ತಲಾ ಒಂದು ಒಕ್ಕೂಟದಲ್ಲಿ ಎರಡು ಸಾವಿರ ರೈತರು ಇದ್ದಾರೆ. ಇವರು ತಾವು ಬೆಳೆದ ಪದಾರ್ಥಗಳನ್ನು ಒಂದೆಡೆ ಕಲೆಹಾಕಿ ಖಾಸಗಿ ಸಂಸ್ಥೆಗಳಿಗೆ ನಿಯಮಿತವಾಗಿ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಅವರ ಬೆಳೆಗೂ ಉತ್ತಮ ದರ ಸಿಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ್, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಕೃಷಿ ಸಚಿವ ಸೋಂಪಾಲ್ ಶಾಸ್ತ್ರಿ, ಸಚಿವ ಎಂ.ಆರ್. ಸೀತಾರಾಂ, ಶಾಸಕ ಅಶ್ವತ್ಥ್ ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ರಿಜ್ವಾನ್ ಹರ್ಷದ್ ಸೇರಿದಂತೆ ಇತರರು ಇದ್ದರು.