ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಂಗಳೂರು, ಮೇ 15: ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕಟ್ಟಡ ಕಾರ್ಮಿಕನನ್ನು ಕೊಂದು ಪಾಯದ ಮಣ್ಣಲ್ಲಿ ಶವ ಹೂತು ಪರಾರಿ ಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜಾರ್ಖಂಡದ ಮಂಗ್ರೋ ಮೆಹತಾ (32), ಗೋನೋರಾಯ್ (42), ಬೈಜ್ಯನಾಥ್ ಕೋಲ್ (45) ಎಂದು ಗುರುತಿಸಲಾಗಿದೆ.
ಕ್ಲಾಸಿಕ್ ಆರ್ಚಿಡ್ ಲೇಔಟ್ನ ಖಾಲಿ ನಿವೇಶನವೊಂದರಲ್ಲಿ ಪಾಯದ ಮಣ್ಣಲ್ಲಿ ಎ.1ರಂದು ಹೂತಿದ್ದ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುಟ್ಟೇನಹಳ್ಳಿ ಪೊಲೀಸರ ಒಂದು ತಂಡ ಜಾರ್ಖಂಡ್ಗೆ ತೆರಳಿ ತನಿಖೆ ನಡೆಸಿದಾಗ ಮೃತ ವ್ಯಕ್ತಿ ಜಾರ್ಖಂಡ್ ರಾಜ್ಯದ ಸಹದೇವ್ರಾಯ್(30) ಎಂದು ತಿಳಿದು ಬಂದಿತ್ತು.
ಅಲ್ಲಿನವರೇ ಆದ ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಸಹದೇವ್ನನ್ನು ಕೊಂದು ಪಾಯದ ಮಣ್ಣಲ್ಲೇ ಶವ ಹೂತು ತಮ್ಮ ರಾಜ್ಯಕ್ಕೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.