ಎನ್ಡಿಎ ಸರಕಾರ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ: ಸಿದ್ದರಾಮಯ್ಯ
ಎನ್ಡಿಎ ಸರಕಾರದ ಮೂರು ವರ್ಷದ ಸಾಧನೆ ಶೂನ್ಯ
ಬೆಂಗಳೂರು, ಮೇ. 26: ಕೇಂದ್ರ ಎನ್ಡಿಎ ಸರಕಾರ ಕಳೆದ ಯುಪಿಎ ಸರಕಾರದ ಯೋಜನೆಗಳ ಹೆಸರುಗಳನ್ನೆ ಬದಲಾಯಿಸಿ ಇವುಗಳು ನಮ್ಮ ಹೊಸ ಯೋಜನೆಗಳು ಎಂದು ಸುಳ್ಳು ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮೋದಿ ಸರಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರಕಾರದ ವೈಫಲ್ಯಗಳನ್ನು ತಿಳಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಯುಪಿಎ ಆಡಳಿತದಲ್ಲಿದ್ದಾಗ ನಿರ್ಮಲ್ ಯೋಜನೆ, ನರ್ಮ್ ಯೋಜನೆ, ಇಂದಿರಾ ಗಾಂಧಿ ಆವಾಸ್ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರಕಾರ ನರ್ಮ್ ಯೋಜನೆ ಹೆಸರನ್ನು ಬದಲಾಯಿಸಿ ಅಮೃತ್ ಯೋಜನೆ, ನಿರ್ಮಲ್ ಯೋಜನೆ ಹೆಸರನ್ನು ಬದಲಾಯಿಸಿ ಸ್ವಚ್ಛ ಭಾರತ್ ಯೋಜನೆ ಎಂಬ ಹೆಸರುಗಳಿಂದ ಕರೆದರೆ ವಿನಹ ಎನ್ಡಿಎ ಸರಕಾರ ಮೂರು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು.
ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ನಿರ್ದಿಷ್ಟವಾದಂತಹ ಬಟ್ಟೆ, ಆಹಾರ ತಿನ್ನಬೇಕೆಂದು ಹೇಳುವ ಮೂಲಕ ಜನರ ಹಕ್ಕುಗಳನ್ನು ದಮನ ಮಾಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ, ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತಿದೆ, ಕೋಮುಗಲಭೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಮೋದಿ ಅವರು ತಮ್ಮ ವೀರಾವೇಶದ ಭಾಷಣಗಳಲ್ಲಿ ಜನರಲ್ಲಿ ಆಶಾಗೋಪುರಗಳನ್ನು ಕಟ್ಟಲು ಹಾಗೂ ನಿರೀಕ್ಷೆಗಳನ್ನು ಹುಟ್ಟಿಸಲು ಪ್ರಯತ್ನಿಸಿರು ವುದನ್ನು ಹೊರತುಪಡಿಸಿದರೆ ಯಾವುದೇ ಸಾಧನೆ ಮಾಡಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಯುವ ಜನರಲ್ಲಿ ಆಸೆ ಮೂಡಿಸಿದ್ದ ಮೋದಿ, ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದ ಕಾರಣ ಜನರಲ್ಲಿ ನಿರಾಸೆ ಉಂಟಾಗಿದೆ ಎಂದು ಹೇಳಿದರು.
14ನೆ ಹಣಕಾಸು ಆಯೋಗದ ನೀತಿಯನ್ವಯ ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಒಂದು ಕೈಯಲ್ಲಿ ಅನುದಾನ ಹೆಚ್ಚಿಗೆ ಮಾಡಿ ಮತ್ತೊಂದು ಕೈಯಲ್ಲಿ ಅಂದರೆ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಅರ್ಧಕ್ಕಿಂತ ಮೊತ್ತವನ್ನು ಕಡಿತ ಮಾಡಲಾಗಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲು ಬಿಜೆಪಿ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಹೊರ ದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ. ಹಾಗೂ ಆ ಹಣದಲ್ಲಿ ಪ್ರತಿ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದರೂ ಇವರಿಂದ ಕಪ್ಪು ಹಣವನ್ನು ತರಲಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ನೋಟ್ ಬ್ಯಾನ್ನಿಂದ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ಆಶ್ವಾಸನೆ ನೀಡಿದ್ದರು. ಆದರೆ, ಈ ಎರಡಕ್ಕೂ ಕಡಿವಾಣ ಬೀಳದೆ ಬಡವರು, ರೈತರು ಕಂಗಾಲಾದರು. ಅಲ್ಲದೆ, ನೋಟ್ ಬ್ಯಾನ್ನಿಂದ ಎಷ್ಟು ಹಣ ಸಂಗ್ರಹವಾಯಿತು ಎಂದು ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಭೀಕರ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು 2 ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ತರಲು ಪ್ರಯತ್ನಿಸಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಸರಕಾರಕ್ಕೆ 3 ವರ್ಷ 30 ವೈಫಲ್ಯಗಳು ಎಂಬ ಸಾಕ್ಷ ಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು
‘ಮೋದಿ, ತಮ್ಮ ವೀರಾವೇಶದ ಭಾಷಣಗಳಲ್ಲಿ ಜನರಲ್ಲಿ ಆಶಾಗೋಪುರಗಳನ್ನು ಕಟ್ಟಲು ಹಾಗೂ ನಿರೀಕ್ಷೆಗಳನ್ನು ಹುಟ್ಟಿಸಲು ಪ್ರಯತ್ನಿಸಿರುವು ದನ್ನು ಹೊರತುಪಡಿಸಿದರೆ ಯಾವುದೇ ಸಾಧನೆ ಮಾಡಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಯುವ ಜನರಲ್ಲಿ ಆಸೆ ಮೂಡಿಸಿದ್ದ ಮೋದಿ, ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ.’
-ಸಿದ್ದರಾಮಯ್ಯ, ಮುಖ್ಯಮಂತ್ರಿ