ರೈತರಿಂದ ನೇರ ಭೂಮಿ ಖರೀದಿಗೆ ಸದನ ಸಮಿತಿ ಶಿಫಾರಸ್ಸು
ಎತ್ತಿನಹೊಳೆ ಯೋಜನೆ ತ್ವರಿತ ಅನುಷ್ಠಾನ: ಹೊಸ ಭೂ ಸಾಧ್ವೀನ ಕಾಯ್ದೆಯನ್ವಯ
ಬೆಂಗಳೂರು, ಜೂ. 20: ಬರ ಪೀಡಿತ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಹಾಲಿ ಇರುವ ಭೂ ಸಾಧ್ವೀನ ಕಾಯ್ದೆಯಡಿ ಭೂ ಸ್ವಾಧೀನ ವಿಳಂಬವಾಗುವುದನ್ನು ತಪ್ಪಿಸಲು ಹೊಸ ಭೂ ಸಾಧ್ವೀನ ಕಾಯ್ದೆಯನ್ವಯ ಅವಶ್ಯ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿ ಭೂಸ್ವಾಧೀನಕ್ಕೆ ಮುಂದಾಗಬೇಕೆಂದು ಸರಕಾರಿ ಭರವಸೆಗಳ ಜಲಸಂಪನ್ಮೂಲ ಇಲಾಖೆ ವಿಧಾನ ಮಂಡಲ ಸಮಿತಿ ಶಿಫಾರಸ್ಸು ಮಾಡಿದೆ.
ಮಂಗಳವಾರ ವಿಧಾನಸಭೆಯಲ್ಲಿ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಮಿತಿಯ ಹದಿನಾಲ್ಕನೆ ವರದಿಯನ್ನು ಮಂಡಿಸಿದರು. ಎತ್ತಿನಹೊಳೆ ಯೋಜನೆಯಡಿ 527 ಸಣ್ಣ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವಿದ್ದು, ಸದರಿ ಕೆರೆಗಳನ್ನು ಹೊಳೆತ್ತಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಸಮಗ್ರ ಕುಡಿಯುವ ನೀರು ಯೋಜನೆ ಕೈಗೊಂಡ ಶಾಶ್ವತ ಕುಡಿಯುವ ನೀರು ಒದಗಿಸಬೇಕು. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಬೇಕು.
ಎತ್ತಿನಹೊಳೆ ಯೋಜನೆಗೆ ಮುಳುಗಡೆ ಗ್ರಾಮಗಳಿಗೆ ಪುನರ್ವಸತಿ ಬದಲಿಗೆ ಎಚ್ಆರ್ಪಿಯಂತೆ ಭೂಮಿ ನೀಡಬೇಕು. ಯೋಜನೆ ಪ್ರದೇಶದಲ್ಲಿ 5.5 ಮೀ ಅಗಲದ ಸೀಮೆಂಟ್ ರಸ್ತೆ ಮಾಡಬೇಕು. ಸುಸ್ಥಿತಿಯಲ್ಲಿ ಇಲ್ಲದ ರಸ್ತೆಗಳನ್ನು ಕೂಡಲೇ ಅಭಿವೃದ್ಧಿಪಡಿಸಬೇಕು. ಈ ಯೋಜನೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.