ಸಾಲ ಭಾದೆ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಬೆಂಗಳೂರು, ಜು.3: ಸಾಲದ ಭಾದೆಯಿಂದಾಗಿ ತಂದೆ-ತಾಯಿ ಇಬ್ಬರು ಮಕ್ಕಳಿದ್ದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ರಾವಕ ಘಟನೆ ಇಲ್ಲಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಂಗಸಂದ್ರದಲ್ಲಿ ವರ್ಕ್ಶಾಪ್ ನಡೆಸುತ್ತಿದ್ದ ಜಗದೀಶ್ (45), ಅವರ ಪತ್ನಿ ಕಸ್ತೂರಿ (43), ಮಕ್ಕಳಾದ ವಿನೋದ್ ಮತ್ತು ಬಾಲಚಂದ್ರ ಮೃತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮೂಲದ ಮೃತ ಜಗದೀಶ್, ಸುಮಾರು ಹದಿನೈದು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಜೀವನೋಪಾಯಕ್ಕೆ ವರ್ಕ್ಶಾಪ್ ಇಟ್ಟುಕೊಂಡಿದ್ದರು. ಆದರೆ, ಇತ್ತೀಚಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲದ ಸುಳಿಗೆ ಸಿಲುಕಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಭೋಗ್ಯಕ್ಕೆ ಇದ್ದ ಇಬ್ಬರು ಬಾಡಿಗೆದಾರರಿಗೆ ಇದೇ ತಿಂಗಳು 7 ಲಕ್ಷ ರೂ. ಹಣ ನೀಡಬೇಕಿತ್ತು ಎಂದು ತಿಳಿದುಬಂದಿದೆ.
ರವಿವಾರ ಮಧ್ಯಾಹ್ನ ಒಟ್ಟಿಗೆ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಜೆಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಂಬಂಧಿಕರು ಕಿಟಕಿ ಒಡೆದು ನೋಡಿದಾಗ ಕುಟುಂಬ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪ್ರರಕಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.