ಕದ್ರಾ ಅಣೆಕಟ್ಟಿನ ಜಲಾಶಯದಲ್ಲಿ ಒಳ ಹರಿವು: ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತಗೊಳ್ಳುವಂತೆ ಸೂಚನೆ
ಬೆಂಗಳೂರು, ಜು.7: ಕದ್ರಾ ಅಣೆಕಟ್ಟಿನ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು, ಯಾವುದೇ ಸಮಯದಲ್ಲಾದರೂ ನೀರು ಹೊರಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟಿನ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಕೆಳಗಿರುವ ಸಾರ್ವಜನಿಕರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಎಚ್ಚರಿಕೆ ನೀಡಿದೆ.
ಕಾಳಿನದಿ ಯೋಜನೆಯ 2 ನೆ ಹಂತವಾದ ಕದ್ರಾ ಅಣೆಕಟ್ಟಿನ ಜಲಾಶಯದ ಒಳ ಹರಿವಿನ ಪ್ರಮಾಣ ಏರಿಕೆಯಾಗಿದ್ದು, ಇಂದಿಗೆ 6, 601 ಕ್ಯೂಸೆಕ್ಸ್ ತುಂಬಿದೆ. ಇದರಿಂದಾಗಿ ಕದ್ರಾ ಅಣೆಕಟ್ಟಿನ ಗರಿಷ್ಠ ಮಟ್ಟವು 34.50 ಮೀಟರ್ಗಳಿದ್ದು, ಈಗ 31.60 ಮೀಟರ್ನಷ್ಟು ತುಂಬಿದೆ. ಹೀಗಾಗಿ ಇದೇ ರೀತಿ ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ನೀರು ಹರಿದು ಬಂದರೆ ಶೀಘ್ರದಲ್ಲಿ ಅಣೆಕಟ್ಟು ತುಂಬುತ್ತದೆ.
ಆದುದರಿಂದ, ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುತ್ತದೆ. ಜಲಾಶಯದ ಪ್ರತಿದಿನದ ನೀರಿನ ಮಟ್ಟ ಮತ್ತು ಒಳಹರಿವಿನ ಪ್ರಮಾಣದ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.