ನಾಗರ ಪಂಚಮಿ ದಿನದಂದು ಹಾಲು ವ್ಯರ್ಥ ಬೇಡ: ಮುರುಘಾ ಶರಣರು
ಬೆಂಗಳೂರು, ಜು.27: ಮೂಢನಂಬಿಕೆಗಳಿಗೆ ಬಲಿಯಾಗಿ ನಾಗರ ಪಂಚಮಿ ಆಚರಣೆ ದಿನದಂದು ಹಾಲು ವ್ಯರ್ಥ ಮಾಡುವುದು ಬೇಡ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಇಂದಿಲ್ಲಿ ಕರೆ ನೀಡಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿತ್ರದುರ್ಗದ ಮುರುಘಾಮಠ ನೇತೃತ್ವದಲ್ಲಿ ಮೂಢನಂಬಿಕೆ ಮತ್ತು ಅಜ್ಞಾನವನ್ನು ಅಳಿಸಲು ರೋಗಿಗಳೊಂದಿಗೆ ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂರಾರು ರೋಗಿಗಳಿಗೆ ಹಾಲು, ಫಲಾಹಾರ ವಿತರಿಸಿ ಅವರು ಮಾತನಾಡಿದರು.
ನಾಗರಪಂಚಮಿ ಆಚರಣೆ ದಿನದಂದು ಅವೈಜ್ಞಾನಿಕವಾಗಿ ಹಾವಿನ ಹುತ್ತಕ್ಕೆ ಹಾಲು ಎರೆಯುವುದು ಸರಿಯಲ್ಲ. ಬದಲಾಗಿ, ರೋಗಿಗಳಿಗೆ ಹಾಲು, ಆಹಾರ ಧಾನ್ಯಗಳನ್ನು ನೀಡಬೇಕು. ಅದುವೇ ಮಾನವೀಯ ಧರ್ಮ ಎಂದು ಶಿವಮೂರ್ತಿ ಶರಣರು ಹೇಳಿದರು.
ಗೋವಿನ ರಕ್ಷಣೆಯ ಅಗತ್ಯವೂ ಇದೆ. ಅದೇ ರೀತಿ, ಹಾಲು ವ್ಯರ್ಥ ಮಾಡುವುದು ಸರಿಯಲ್ಲ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳಿದ್ದು, ರೋಗಿಗಳಿಗೆ ನೀಡಿದರೆ, ಬಹಳ ಅನುಕೂಲವಾಗಲಿದೆ ಎಂದ ಅವರು, ನಾಗರಪಂಚಮಿಯನ್ನು ಬಸವಪಂಚಮಿ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತಿದ್ದು, ಇದರಿಂದ ಮಾನವೀಯ ಮೌಲ್ಯಗಳು ಉಳಿಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಿಯ ಡಾ.ಎಚ್.ರವಿಕುಮಾರ್, ತಿಂಡ್ಲು ಬಸವರಾಜು, ಉರಗತಜ್ಞ ಜೆ.ಎಂ.ಗೌರೀಶ್ ಸೇರಿ ಪ್ರಮುಖರು ಹಾಜರಿದ್ದರು.