ಜಾತಿ - ಅಸ್ಪ್ರಶ್ಯತೆ ಇರುವವರೆಗೆ ಸ್ವಾತಂತ್ರ್ಯ ಮರೀಚಿಕೆ: ಬೃಂದಾ ಕಾರಟ್
ಇಂಡಿಯಾ-70 ಹಾಗೂ ಜನಶಕ್ತಿ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ
ಬೆಂಗಳೂರು, ಆ.19: ದೇಶದಲ್ಲಿ ಜಾತಿ ಹಾಗೂ ಅಸ್ಪ್ರಶ್ಯತೆ ನಿರ್ಮೂನೆ ಆಗುವವರೆಗೆ ಸ್ವಾತಂತ್ರ ಎಂಬುದು ಮರೀಚಿಕೆ ಎಂದು ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯೆ ಬೃಂದಾ ಕಾರಟ್ ಅಭಿಪ್ರಾಯಿಸಿದ್ದಾರೆ.
ಶನಿವಾರ ಜನಶಕ್ತಿ ವತಿಯಿಂದ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಡಿಯಾ-70 ಹಾಗೂ ಜನಶಕ್ತಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ಶೋಷಣೆ ಕಾಲ, ಸಂದರ್ಭಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ವಿಜೃಂಭಿಸುತ್ತಿದೆ ಎಂದು ವಿಷಾದಿಸಿದರು.
ಪ್ರಸ್ತುತದ ಅಂಕಿ ಅಂಶದ ಪ್ರಕಾರ ಶೇ.1ರಷ್ಟು ಮಂದಿಯಲ್ಲಿ ಶೇ.58ರಷ್ಟು ದೇಶದ ಸಂಪತ್ತು ಕೇಂದ್ರೀಕರಣಗೊಂಡಿದೆ. ಇಲ್ಲಿ ರೈತ-ಕಾರ್ಮಿಕರ ಬದುಕಿಗೆ ಯಾವುದೇ ಬೆಲೆ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಿದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಇಲ್ಲಿಯವರೆಗೂ ದೇಶದ ಆಳ್ವಿಕೆ ನಡೆಸಿದ ಯಾವು ಸರಕಾರಗಳು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಗೆ ಹೆಚ್ಚಿನ ಒತ್ತು ನೀಡಿಲ್ಲ. ಕೇವಲ ಕಾರ್ಪೊರೇಟ್ ಶಕ್ತಿಗಳ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು ರೂಪಿಸುವುದರಲ್ಲಿಯೇ ಕಾಲ ಕಳೆದಿವೆ. ಹೀಗಾಗಿ ಇಂತಹ ಬಂಡವಾಳಶಾಹಿ ಹಾಗೂ ಕೋಮುವಾದಿಪರ ರಾಜಕೀಯ ಪಕ್ಷಗಳಿಂದ ಜನಪರ ನಿಲುವುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಾಮಾನ್ಯ ಜನತೆಯಿಂದ ಮಾತ್ರ ಸಮ ಸಮಾನತೆಯ ಭಾರತವನ್ನು ಕಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಐಕ್ಯತಾ ಹೋರಾಟ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಜನಪರ ಸಂಘಟನೆಗಳು ಮತ್ತಷ್ಟು ಸಕ್ರಿಯಗೊಳ್ಳಬೇಕಾಗಿದೆ ಎಂದು ಬೃಂದಾ ಕಾರಟ್ ಅಭಿಪ್ರಾಯಿಸಿದ್ದಾರೆ.
ಆರೆಸ್ಸೆಸ್ ಹಾಗೂ ಬಿಜೆಪಿಗೆ ನಮ್ಮ ರಾಷ್ಟ್ರಧ್ವಜದ ಮೇಲೆ ಕಿಂಚಿತ್ತೂ ಪ್ರೀತಿಯಾಗಲಿ, ಗೌರವವಾಗಲಿ ಇಲ್ಲ. ಆದರೂ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ರಾಷ್ಟ್ರಧ್ವಜವನ್ನು ಬಳಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಉದ್ದೇಶ ಪೂರ್ವಕವಾಗಿಯೇ ಉತ್ತರ ಪ್ರದೇಶದಲ್ಲಿ ಹಾಗೂ ಕೇರಳದಲ್ಲಿ ರಾಷ್ಟ್ರಧ್ವಜದ ಕುರಿತು ವಿವಾದ ಸೃಷ್ಟಿಸಿದರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಜನಶಕ್ತಿ ಪತ್ರಿಕೆಯ ಸಂಪಾದಕ ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ಕಾರ್ಯದರ್ಶಿ ಮಂಡಳಿಯ ಸದಸ್ಯ ಜಿ.ಎನ್.ನಾಗರಾಜ್, ಕೃಷಿ ಕೂಲಿ ಕಾರ್ಮಿಕ ಸಂಘದ ಮುಖಂಡ ನಿತ್ಯಾನಂದ ಸ್ವಾಮಿ, ಕಾರ್ಮಿಕ ಮುಖಂಡ ಉಮೇಶ್ ಮತ್ತಿತರರಿದ್ದರು.
ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ನೋಟು ನಿಷೇಧ, ಜಿಎಸ್ಟಿ, ಸರಕಾರಿ ಸಂಸ್ಥೆಗಳ ಖಾಸಗಿಕರಣ ಸೇರಿದಂತೆ ಹಲವು ಜನವಿರೋಧಿ ನೀತಿಗಳನ್ನು ಜಾರಿ ಮಾಡಿದೆ. ಹಾಗೂ ಇಡೀ ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳ ಒಡೆತನಕ್ಕೆ ಒಪ್ಪಿಸಲು ತುದಿಗಾಲಲ್ಲಿ ನಿಂತಿದೆ. ಹೀಗಾಗಿ ದೇಶಕ್ಕೆ ಸ್ವಾತಂತ್ರ ಬಂದ ಈ 70ವರ್ಷದಲ್ಲಿ ನಮ್ಮ ಮುಂದಿರುವ ದೊಡ್ಡ ಸವಾಲು ಎಂದರೆ ಬಿಜೆಪಿಯಿಂದ ದೇಶವನ್ನು ಪಾರು ಮಾಡುವುದಾಗಿದೆ.
-ಬೃಂದಾ ಕಾರಟ್ ಪೊಲಿಟ್ ಬ್ಯುರೋ ಸದಸ್ಯೆ ಸಿಪಿಎಂ