ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಮುಷ್ಕರ
ಸಾರ್ವಜನಿಕರ ಪರದಾಟ
ಬೆಂಗಳೂರು, ಆ.22: ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ, ಖಾಸಗೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಇಂದು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು.
ರಾಷ್ಟ್ರದ ಒಂಬತ್ತು ಕಾರ್ಮಿಕ ಸಂಘಟನೆಗಳ ನೇತೃತ್ವದ ಜಂಟಿ ಸಮಿತಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 1 ಲಕ್ಷಕ್ಕೂ ಅಧಿಕ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಮುಷ್ಕರದಲ್ಲಿ ಭಾಗವಹಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ದಿನದ ಸಾಂಕೇತಿಕ ಮುಷ್ಕರದ ಪರಿಣಾಮವಾಗಿ ಬಹುತೇಕ ಬ್ಯಾಂಕ್ಗಳಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳು ನಡೆದಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಬಹುತೇಕ ಗ್ರಾಹಕರಿಗೆ ಮುಷ್ಕರ, ಪ್ರತಿಭಟನೆಯ ಬಗ್ಗೆ ತಿಳಿಯದಿದ್ದರಿಂದ ಬ್ಯಾಂಕ್ಗಳಿಗೆ ತೆರಳಿ, ನಿರಾಶರಾಗಿ ಹಿಂತಿರುಗಿದ ಪ್ರಸಂಗ ನಡೆಯಿತು.
ನಗರದಲ್ಲಿನ 500 ಕ್ಕೂ ಹೆಚ್ಚು ರಾಷ್ಟ್ರೀಯ ಬ್ಯಾಂಕ್ ಶಾಖೆಗಳ ಒಂದು ಸಾವಿರಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುನೈಟೆಡ್ ಫೋರಂ ಯೂನಿಯನ್ ಸಂಚಾಲಕ ವಸಂತ ರೈ, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರವನ್ನು ನಾಶ ಮಾಡುವ ವ್ಯವಸ್ಥಿತವಾದ ಹುನ್ನಾರ ಮಾಡಲಾಗುತ್ತಿದೆ. ಹೀಗಾಗಿ, ಕೂಡಲೇ ಈ ನೀತಿಯನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಬ್ಯಾಂಕುಗಳಿಗೆ ಅಗತ್ಯವಿರುವಷ್ಟು ಬಂಡವಾಳವನ್ನು ಸರಕಾರ ಪೂರೈಸುತ್ತಿಲ್ಲ. ಇದರಿಂದ ಬ್ಯಾಂಕುಗಳ ವಿಸ್ತರಣೆಗೆ ಧಕ್ಕೆಯಾಗುತ್ತದೆ. ಅಲ್ಲದೆ, ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮತ್ತು ಸಣ್ಣ ಬ್ಯಾಂಕುಗಳ ಸ್ಥಾಪನೆಗೆ ಪರವಾನಗಿ ನೀಡುತ್ತಿರುವುದರಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ದುರ್ಬಲಗೊಳ್ಳುತ್ತಿವೆ. ಆದುದರಿಂದ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಗ್ರಾಹಕರ ಸ್ನೇಹಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ಗಳಲ್ಲಿ ವಿವಿಧ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಆರ್ಬಿಐ ಸ್ಪಷ್ಟನೆ ನೀಡಬೇಕು ಹಾಗೂ ಎಲ್ಲ ಬ್ಯಾಂಕ್ಗಳಿಗೆ ನಿರ್ದೇಶನ ನೀಡಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಹಣಕ್ಕೆ ಬಡ್ಡಿ ಕಡಿತ ಮಾಡುವುದನ್ನು ಹಿಂಪಡೆಯಬೇಕು ಎಂದು ರೈ ಒತ್ತಾಯಿಸಿದರು.
ಸುಸ್ತಿ ಸಾಲ ವಸೂಲಾತಿಗಾಗಿ ಸಂಸತ್ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡಬೇಕು. ಬ್ಯಾಂಕ್ಗಳ ನಿರ್ದೇಶಕ ಮಂಡಳಿಗಳಲ್ಲಿ ಖಾಲಿ ಇರುವ ಎಲ್ಲಾ ನೌಕರರ ಮತ್ತು ಅಧಿಕಾರಿ ನಿರ್ದೇಶಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಬ್ಯಾಂಕ್ಗಳಲ್ಲಿ ಸಣ್ಣ ಪ್ರಮಾಣದ ಸಾಲಗಳನ್ನು ವಿತರಿಸಲು ಆಗುತ್ತಿಲ್ಲ. ದೊಡ್ಡ ದೊಡ್ಡ ಕಾರ್ಪೊರೇಟ್ ವಲಯಗಳಿಗೆ ಅಧಿಕ ಮೊತ್ತದಲ್ಲಿ ಸಾಲ ವಿತರಣೆಯಾಗುತ್ತಿದೆ. ಆದರೆ ಸಾಲದ ಮರುಪಾವತಿ ಆಗುತ್ತಿಲ್ಲ. ಹಾಗಾಗಿ ತಕ್ಷಣವೇ ವಿಜಯ್ ಮಲ್ಯ ಅವರಂತಹ ದೊಡ್ಡ ಉದ್ಯಮಿಗಳಿಂದ ಸಾಲವನ್ನು ಮರುಪಾವತಿ ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಮನವಿ ಮಾಡಿದರು.