ಕರಣ್ ಜೋಹರ್ ಹೊಸ ಸಿನಿಮಾ 'ಶಿದ್ದತ್' ನಲ್ಲಿ ಶ್ರೀದೇವಿ ಜಾಗಕ್ಕೆ ಬಂದರು ಈ ಖ್ಯಾತ ನಟಿ
ಊಹಿಸಬಲ್ಲಿರಾ ಯಾರು ಈಕೆ ಎಂದು ?
ಮುಂಬೈ, ಮಾ. 19 : ಶ್ರೀದೇವಿ ಹಠಾತ್ ನಿಧನದಿಂದ ಖ್ಯಾತ ನಿರ್ದೇಶಕ , ನಿರ್ಮಾಪಕ ಕರಣ್ ಜೋಹರ್ ರ ಮಹತ್ವಾಕಾಂಕ್ಷಿ ಹೊಸ ಚಿತ್ರ 'ಶಿದ್ದತ್' ನೆನೆಗುದಿಗೆ ಬಿದ್ದಿದೆ ಎಂದು ಹೇಳಲಾಗಿತ್ತು. ಕರಣ್ ಜೋಹರ್ ಹೊಸ ಸಿನಿಮಾವೆಂದರೆ ಇಡೀ ಬಾಲಿವುಡ್ ತಿರುಗಿ ನೋಡುತ್ತದೆ. ಸ್ಟಾರ್ ನಟರು, ವೈಭವದ ಸೆಟ್ ಗಳು, ಆಕರ್ಷಕ ಲೊಕೇಶನ್ ಗಳು, ರೊಮ್ಯಾಂಟಿಕ್ ಕತೆ, ಇಂಪಾದ ಹಾಡುಗಳು ಎಲ್ಲವೂ ಅಲ್ಲಿರುತ್ತವೆ. ಇನ್ನು 'ಶಿದ್ದತ್' ನಲ್ಲಿ ಶ್ರೀದೇವಿಗೆ ಪ್ರಮುಖ ಪಾತ್ರವಿತ್ತು. ಚಿತ್ರದ ಬಗ್ಗೆ ಆಕೆ ಹಾಗು ಕರಣ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು.
ಆದರೆ 'ಶ್ರೀದೇವಿ' ನಿಧನದಿಂದ ಚಿತ್ರದ ಯೋಜನೆಗೆ ತಡೆ ಬಿದ್ದಿತ್ತು ಎಂದು ಸುದ್ದಿಯಾಗಿತ್ತು. ಈಗ ಮತ್ತೆ ಚಿತ್ರದ ತಯಾರಿಗೆ ಚಾಲನೆ ಸಿಕ್ಕಿರುವ ವರದಿಯಾಗಿದೆ. ಶ್ರೀದೇವಿ ಪಾತ್ರಕ್ಕೆ ಯಾರು ಬಂದಿದ್ದಾರೆ ಗೊತ್ತೇ ? ಮೋಹಕ ನಟಿ ಮಾಧುರಿ ದೀಕ್ಷಿತ್ !
ಈ ಬಗ್ಗೆ ಅಲ್ಲಲ್ಲಿ ವದಂತಿ ಹರಡುತ್ತಿತ್ತು. ಆದರೆ ಸೋಮವಾರ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸ್ವತಃ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
"ಅಭಿಷೇಕ್ ವರ್ಮನ್ ನಿರ್ದೇಶನದ ಈ ಚಿತ್ರ ಅಮ್ಮನಿಗೆ ಅತ್ಯಂತ ಬಹಳ ಪ್ರೀತಿಯ ಚಿತ್ರವಾಗಿತ್ತು... ಈಗ ಮಾಧುರಿಜೀ ಅಮ್ಮನ ಪಾತ್ರಕ್ಕೆ ಬಂದಿರುವುದು ನನಗೆ, ಅಪ್ಪನಿಗೆ (ಬೋನಿ ಕಪೂರ್) ಹಾಗು ತಂಗಿಗೆ (ಖುಷಿ ಕಪೂರ್) ಬಹಳ ಖುಷಿ ಕೊಟ್ಟಿದೆ. ಅವರಿಗೆ ಧನ್ಯವಾದಗಳು " ಎಂದು ಜಾಹ್ನವಿ ಟ್ವೀಟ್ ಮಾಡಿದ್ದಾರೆ.
ವರುಣ್ ಧವನ್, ಆಲಿಯಾ ಭಟ್, ಸಂಜಯ್ ದತ್ , ಸೋನಾಕ್ಷಿ ಸಿನ್ಹಾ , ಆದಿತ್ಯ ರಾಯ್ ಕಪೂರ್ ಮತ್ತಿತರರು ಈ ಚಿತ್ರದಲ್ಲಿದ್ದಾರೆ.