ಉರ್ವಿ ಕತ್ತಲೆ ಜಗತ್ತಿಗೆ ಬಣ್ಣದ ಲೇಪ
ನಿರ್ದೇಶನ : ಬಿ.ಎಸ್.ಪ್ರದೀಪ್ ವರ್ಮಾ, ನಿರ್ಮಾಣ : ಬಿ.ಆರ್.ಪಿ.ಭಟ್, ಸಂಗೀತ : ಮನೋಜ್ ಜಾರ್ಜ್, ಛಾಯಾಗ್ರಹಣ : ಆನಂದ್ ಸುಂದರೇಶ, ತಾರಾಗಣ : ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಅಚ್ಯುತ್ ಕುಮಾರ್, ಭವಾನಿ ಪ್ರಕಾಶ್ ಮತ್ತಿತರರು.
ಕೋಲ್ಕತ್ತಾಯೇದ ವೇಶ್ಯಾಗೃಹವೊಂದರಲ್ಲಿನ ಇಬ್ಬರು ಹೆಣ್ಣುಮಕ್ಕಳ ಬದುಕಿನ ನೈಜ ಘಟನೆಯೊಂದರ ಪ್ರೇರಣೆಯಿಂದ ತಯಾರಾಗಿರುವ ಸಿನೆಮಾ ‘ಉರ್ವಿ’. ಅಲ್ಲಿನ ಇಬ್ಬರು ವೇಶ್ಯೆಯರ ಬದುಕು, ಮತ್ತೊಬ್ಬ ವಿದ್ಯಾವಂತ ಯುವತಿ ತನಗೆ ಅರಿವಿಲ್ಲದಂತೆಯೇ ಈ ಮಾಫಿಯಾದಲ್ಲಿ ಸಿಲುಕುವುದು, ಈ ಕೂಪದಿಂದ ಹೊರಬರುವ ಹಾದಿಯಲ್ಲಿನ ಹೋರಾಟ ಹಾಗೂ ಇದಕ್ಕೊಂದು ಅಂತ್ಯ ಕಾಣಿಸುವ ಇವರ ನಿರ್ಧಾರದ ಸುತ್ತ ಕತೆ ಚಲಿಸುತ್ತದೆ. ಚಿತ್ರಕಲಾವಿದರೂ ಆಗಿರುವ ನಿರ್ದೇಶಕ ಪ್ರದೀಪ್ ವರ್ಮಾ ಸಿನೆಮಾದಲ್ಲಿ ತಮ್ಮನ್ನು ಪ್ರತಿನಿಧಿಸುವ ಪಾತ್ರವೊಂದನ್ನು ಕೂಡ ಸೃಷ್ಟಿಸಿದ್ದಾರೆ. ಮೂವರು ನಾಯಕಿಯರೇ ಪ್ರಧಾನ ಪಾತ್ರಗಳಲ್ಲಿರುವ ಸಿನೆಮಾವನ್ನು ಆಕರ್ಷಕವಾಗಿ ರೂಪಿಸುವ ಪ್ರಯತ್ನದಲ್ಲಿ ಅವರು ಭಾಗಶಃ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ನೈಜ ಫಟನೆಯ ಜೊತೆಗೆ ಸಿನೆಮಾದ ನಾಟಕೀಯತೆಗಾಗಿ ನಿರ್ದೇಶಕರಲ್ಲಿ ಹಲವಾರು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಎರಡು ಲವ್ಸ್ಟೋರಿಗಳೂ ಇವೆ. ಅಲ್ಲದೆ ವೇಶ್ಯಾವಾಟಿಕೆ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ, ವ್ಯವಸ್ಥೆಯಲ್ಲಿನ ಅಧಿಕಾರಿಗಳ ಶಾಮೀಲು... ಹೀಗೆ ಕೆಲವು ಸೂಕ್ಷ್ಮ ಸಂಗತಿಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಕತೆಗೆ ಸಂಬಂಧಿಸಿದಂತೆ ಅವರು ಸಾಕಷ್ಟು ಹೋಂವರ್ಕ್ ಮಾಡಿರುವುದು ಸಿನೆಮಾ ವೀಕ್ಷಿಸುವಾಗ ಗೋಚರಿಸುತ್ತದೆ. ಆದರೆ ಉತ್ತರ ಭಾರತದ ಹೆಣ್ಣುಮಕ್ಕಳಿಬ್ಬರ ಬದುಕಿನ ಕತೆಯನ್ನು ಇಲ್ಲಿನ ಪ್ರಾದೇಶಿಕತೆಗೆ ಹೊಂದಿಸುವಲ್ಲಿ ಕೊಂಚ ಎಡವಿದ್ದಾರೆ. ಒಂದೆಡೆ ಹಸಿಹಸಿಯಾಗಿ ವೇಶ್ಯಾವಾಟಿಕೆಯ ಕ್ರೂರತೆಯನ್ನು ತೋರಿಸಲು ಹೊರಡುವ ಅವರು ಮತ್ತೊಂದೆಡೆ ಬಣ್ಣಬಣ್ಣದ ಕೃತಕ ಸೆಟ್ಗಳನ್ನು ಹಾಕಿ ಅಲ್ಲಿನ ನೈಜತೆಗೆ ಭಂಗ ತರುತ್ತಾರೆ. ತಮ್ಮ ಅಭಿಪ್ರಾಯ ದಾಖಲಿಸುವ ಉತ್ಸಾಹದಲ್ಲಿ ತಮ್ಮನ್ನು ಪ್ರತಿನಿಧಿಸುವ ಕಲಾವಿದನ ಪಾತ್ರವೊಂದನ್ನು ಸೃಷ್ಟಿಸುವ ಅವರ ಕ್ರಿಯಾಶೀಲತೆಯನ್ನೇನೋ ಮೆಚ್ಚಬಹುದು. ಆದರೆ ಇದು ಕತೆಯೊಂದಿಗೆ ಸಂಪೂರ್ಣವಾಗಿ ಬೆಸೆದುಕೊಳ್ಳದೆ ಚೌಕಟ್ಟಿನಿಂದ ಹೊರಗೇ ಉಳಿಯುತ್ತದೆ ಎನ್ನುವುದು ನೋಡುಗನಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಚಿತ್ರದ ಮೊದಲಾರ್ಧದ ಕೆಲವು ಸನ್ನಿವೇಶಗಳು ಬಿಡಿಬಿಡಿಯಾಗಿ ಕಾಣಿಸುತ್ತವೆ. ಅಲ್ಲೊಂದಿಷ್ಟು ಸರಿಯಾದ ಬೆಸುಗೆ ಬೇಕಿತ್ತು ಎನಿಸುತ್ತದಾದರೂ ಕಲಾವಿದರ ಉತ್ತಮ ಅಭಿನಯ ಮತ್ತು ಛಾಯಾಗ್ರಹಣದ ತಂತ್ರಗಾರಿಕೆ ಇದನ್ನು ಮರೆಮಾಚುತ್ತದೆ. ವಿರಾಮದ ನಂತರದಲ್ಲಿನ ಕೆಲವು ತಿರುವುಗಳು ಪ್ರೇಕ್ಷಕರಲ್ಲಿ ಆಸಕ್ತಿ ಹುಟ್ಟಿಸುವುದರ ಜತೆಗೆ ಪುರುಷ ಸಮುದಾಯದ ಬಗ್ಗೆ ಹೇವರಿಕೆಯನ್ನೂ ಹುಟ್ಟಿಸುತ್ತವೆ. ಅತಿಯಾದ ನಾಟಕೀಯತೆಗೋಸ್ಕರವೋ ಇಲ್ಲವೇ ನಾಯಕಿ ಪ್ರಧಾನ ಸಿನೆಮಾ ಎನ್ನುವ ಕಾರಣಕ್ಕೂ ನಿರ್ದೇಶಕರು ಇಂಥದ್ದೊಂದು ಆಯ್ಕೆಗೆ ಮನಸ್ಸು ಮಾಡಿರಬಹುದು. ಆದರೆ ವ್ಯವಸ್ಥೆಯೊಳಗಿದ್ದುಕೊಂಡೇ ಹೋರಾಡಿ ಗೆಲ್ಲುವ ಈ ಹೊತ್ತಿನ ಮಾದರಿ ಸ್ತ್ರೀ ಸಮುದಾಯಕ್ಕೆ ಇದು ಪಥ್ಯವಾಗುವುದಿಲ್ಲ ಎಂದೇ ಹೇಳಬಹುದು. ಪ್ರಮುಖವಾಗಿ ಇದು ಮೂರು ಸ್ತ್ರೀ ಪಾತ್ರಗಳ ಕತೆಯಾದರೂ ಚಿತ್ರದಲ್ಲಿನ ಹತ್ತಾರು ಪಾತ್ರಗಳು ಪ್ರೇಕ್ಷಕರಿಗೆ ನೆನಪಿನಲ್ಲಿಳಿಯುತ್ತವೆ. ನಿರ್ದೇಶಕರು ಚಿಕ್ಕ-ಪುಟ್ಟ ಪಾತ್ರಗಳನ್ನೂ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ತಮ್ಮ ಪಾತ್ರಗಳ ಔಚಿತ್ಯ ಅರಿತು ನಟಿಸಿದ್ದಾರೆ. ಈ ಮೂವರ ಪೈಕಿ ಸಂಯಮದ ನಟನೆಯಿಂದ ಶ್ರುತಿ ಹೆಚ್ಚು ಆಪ್ತವಾಗುತ್ತಾರೆ. ದುಷ್ಟತನವೇ ಮೈವೆತ್ತ ‘ದೇವರಗುಂಡ’ನಾಗಿ ಅಚ್ಯುತ್ಕುಮಾರ್ ಅವರದ್ದು ಕಾಡುವ ಪಾತ್ರ. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಭವಾನಿ ಶಂಕರ್ ‘ಘರ್ವಾಲಿ’ಯಾಗಿ ನಟಿಸಿದ್ದು, ಈ ಪಾತ್ರದೊಂದಿಗೆ ಅವರು ಮತ್ತೆ ಹಿರಿತೆರೆಯಲ್ಲಿ ಸುದ್ದಿ ಮಾಡುವ ಸೂಚನೆ ನೀಡಿದ್ದಾರೆ. ಚಿತ್ರವನ್ನು ಸುಂದರ ಕ್ಯಾನ್ವಾಸ್ನಂತೆ ಚೆಂದಗಾಣಿಸುವ ನಿರ್ದೇಶಕರ ಯೋಜನೆಗೆ ಛಾಯಾಗ್ರಾಹಕ ಆನಂದ್ ಸುಂದರೇಶ್ ಅವರಿಂದ ಉತ್ತಮ ಬೆಂಬಲ ಸಿಕ್ಕಿದೆ. ಕೆಲವು ಲೋಪಗಳ ಹೊರತಾಗಿ ನೋಡುವುದಾದರೆ ಇತ್ತೀಚಿನ ಕ್ರಿಯಾಶೀಲ ಯುವ ತಂತ್ರಜ್ಞರ ಸಿನೆಮಾಗಳ ಪಟ್ಟಿಗೆ ಈ ಚಿತ್ರವನ್ನೂ ಸೇರ್ಪಡೆಗೊಳಿಸಬಹುದು.
*ರೇಟಿಂಗ್ - **1/2