ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಸುಳ್ಳು ವದಂತಿ: ನಟ ಶಿವಣ್ಣ ಬೇಸರ
ಬೆಂಗಳೂರು, ಮೇ 20: ಪಾರ್ವತಮ್ಮ ರಾಜ್ ಕುಮಾರ್ ಅವರ ಕುರಿತಂತೆ ಸುಮ್ಮಸುಮ್ಮನೆ ಹಲವು ರೀತಿಯ ಸಂದೇಶಗಳು ಹರಿದಾಡುತ್ತಿವೆ ಎಂದು ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ತಾಯಿ ಚಿಕಿತ್ಸೆ ಪಡೆಯುತ್ತಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಅಮ್ಮ ಆರೋಗ್ಯವಾಗಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ಸುಮ್ಮಸುಮ್ಮನೆ ಹಲವು ರೀತಿಯ ಸಂದೇಶಗಳು ಬರುತ್ತವೆ. ಅದನೆಲ್ಲಾ ಪರಿಗಣಿಸಲು ಸಾಧ್ಯವಿಲ್ಲ. ಇದರಲ್ಲಿ ಮುಚ್ಚುಮರೆ ಮಾಡಲು ಏನೂ ಇಲ್ಲ ಎಂದರು. ಅಮ್ಮನಿಗೆ ಏನಾದರೂ ಆಗಿದ್ದರೆ, ನಾವೆಲ್ಲ ಹೀಗೆ ಇರಲು ಸಾಧ್ಯವಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ವೈದ್ಯರ ತಂಡ ತಮ್ಮ ತಾಯಿ ಆರೋಗ್ಯವನ್ನು ಉತ್ತಮ ವೈದ್ಯರ ತಂಡ ನೋಡಿಕೊಳ್ಳುತ್ತಿದೆ ಯಾವುದೇ ವದಂತಿಗಳಿಗೆ ಅವಕಾಶ ನೀಡಬೇಡಿ ಎಂದು ರಾಘವೇಂದ್ರ ರಾಜ್ ಕುಮಾರ್ ಕೂಡಾ ಜನರಲ್ಲಿ ಮನವಿ ಮಾಡಿಕೊಂಡರು.
ಪಾರ್ವತಮ್ಮ ಚೇತರಿಕೆ : ವೈದ್ಯರ ಸ್ಪಷ್ಟನೆ
ಈ ಮಧ್ಯೆ, ನಿರ್ಮಾಪಕಿ ಪಾರ್ವತಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ಕ್ರೀಯೋಟಿನಲ್ಲೂ ಯಾವುದೇ ಬದಲಾವಣೆಯಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಡಯಾಲೀಸಿಸ್ ಚಿಕಿತ್ಸೆಯನ್ನು ನಿಲ್ಲಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.