ಕಟ್ಟಪ್ಪನ ಕತ್ತಿಯಿಂದ ಪ್ರಭಾಸ್ ಗೆ ಇರಿದ ವರುಣ್ ಧವನ್!
ಹೊಸದಿಲ್ಲಿ, ಜೂ.20: ಬಾಹುಬಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವಾದ ಕಟ್ಟಪ್ಪ ಬಾಹುಬಲಿಗೆ ಇರಿಯುವ ದೃಶ್ಯ ಸಿನಿಮಾ ಪ್ರೇಮಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಬಾಹುಬಲಿ-2 ಚಿತ್ರದಲ್ಲಿ ಇದಕ್ಕೆ ಉತ್ತರವೂ ಸಿಕ್ಕಿತ್ತು. ಇದೀಗ ಮತ್ತೊಮ್ಮೆ ಕಟ್ಟಪ್ಪನ ಕತ್ತಿ ಸುದ್ದಿಯಾಗಿದೆ. ಏಕೆಂದರೆ ಬಾಲಿವುಡ್ ನಟ ವರುಣ್ ಧವನ್ ಇದೇ ಕತ್ತಿಯಲ್ಲಿ ಬಾಹುಬಲಿ ನಟ ಪ್ರಭಾಸ್ ಗೆ ಇರಿದಿದ್ದಾರೆ. ಆದರೆ ಇದು ನಡೆದದ್ದು ರಿಯಲ್ಲಾಗಿ ಅಲ್ಲ. ಬದಲಾಗಿ ಮನರಂಜನೆಗಾಗಿ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಮನೆಯಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. 'ಬಾಹುಬಲಿ-2' ಚಿತ್ರದ ವಿತರಣೆಯ ಹಕ್ಕನ್ನು ಹೊಂದಿರುವ ಕರಣ್ ಜೋಹರ್ ಆಯೋಜಿಸಿದ್ದ ಈ ಗೆಟ್ ಟುಗೇದರ್ ಕಾರ್ಯಕ್ರಮದಲ್ಲಿ ಪ್ರಭಾಸ್ ಕೂಡ ಭಾಗವಹಿಸಿದ್ದರು. ರಾಣಾ ಸಹಿತ ಹಲವು ತಾರೆಯರು ಅಲ್ಲಿದ್ದರು. ಅವರ ಜೊತೆಗಿದ್ದ ವರುಣ್ 'ಬಾಹುಬಲಿ' ಚಿತ್ರದ ಸೀನ್ ಒಂದನ್ನು ನೆನಪಿಸಿಕೊಂಡರಂತೆ. ಅಷ್ಟೇ ಅಲ್ಲ ಅಲ್ಲೆ ಇದ್ದ, ಕಟ್ಟಪ್ಪ ಬಳಸಿದ ಕತ್ತಿಯನ್ನು ತೆಗೆದ ವರುಣ್, ಬಾಹುಬಲಿಯನ್ನು ಇರಿಯುವ ರೀತಿ ಪ್ರಭಾಸ್ ಗೆ ಇರಿಯುವ ಪೋಸ್ ನೀಡಿದ್ದಾರೆ. ಪಾರ್ಟಿಯಲ್ಲಿದ್ದವರು ಈ ಸನ್ನಿವೇಶವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.