ಬಂದರೋ 'ಮಹಾನುಭಾವರು'
ಸಂದೀಪ ನಾಗಲೀಕರ್ ಸಿಂಧನೂರು ನಿರ್ದೇಶನದ ಪ್ರಥಮ ಚಿತ್ರವೇ 'ಮಹಾನುಭಾವರು'. ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಂಡ ನೀಡಿದ ಮಾಹಿತಿ ಇಲ್ಲಿದೆ.
"ಚಿತ್ರದಲ್ಲಿ ಇಬ್ಬರು ಯುವಕರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಬ್ಬಾತ ನಾಳೆಯ ಬಗ್ಗೆ ಯೋಜನೆ ಹಾಕುತ್ತಿರುತ್ತಾನೆ. ಇನ್ನೊಬ್ಬಾತ ಇವತ್ತಿನದ್ದನ್ನು ಮಾತ್ರ ಯೋಚಿಸುತ್ತಾನೆ. ಆದರೆ ಬದುಕಲ್ಲಿ ಯಾವುದು ಹೇಗೆ ಮುಖ್ಯವಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದೇನೆ" ಎನ್ನುತ್ತಾರೆ ನಿರ್ದೇಶಕರು.
ಚಿಕ್ಕದಾಗಿ ಶುರು ಮಾಡಿದ ಚಿತ್ರ ಅರ್ಜುನ್ ಜನ್ಯರ ಹಿನ್ನೆಲೆ ಸಂಗೀತ, ಯೋಗರಾಜ ಭಟ್ಟರ ಗೀತರಚನೆಯ ಮೂಲಕ ದೊಡ್ಡ ಮಟ್ಟದ ಚಿತ್ರವಾಗಿದೆ ಎಂದ ನವ ನಿರ್ಮಾಪಕ ಬಾಲಚಂದರ್ ಚಿತ್ರದ ನಾಯಕರೂ ಹೌದು. ಹಂಸಲೇಖರ ಗರಡಿಯಲ್ಲಿ ಪಳಗಿರುವ ಪ್ರತಿಭೆ ಸತೀಶ್ ಮೌರ್ಯ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಐದು ಹಾಡು ಮತ್ತು ಒಂದು ತುಣುಕುಗಳಿದ್ದು ಒಂದು ಹಾಡನ್ನು ಬರೆದಿರುವ ಮಾಗಡಿ ಲೋಕೇಶ್ ಖುದ್ದಾಗಿ ಹಾಡಿದ್ದಾರೆ. ಗೀತೆಯೊಂದನ್ನು ವಿಜಯ ಪ್ರಕಾಶ್ ಕೂಡ ಆಲಾಪಿಸಿರುವುದು ಗಮನಾರ್ಹ. ಚಿತ್ರದಲ್ಲಿ ಪ್ರಿಯಾಂಕ ಮತ್ತು ಅನುಷಾ ರೈ ಎಂಬ ಹೊಸ ಮುಖಗಳನ್ನು ನಾಯಕಿಯಾಗಿ ಪರಿಚಯಿಸಲಾಗುತ್ತಿದೆ.