ಮುಗುಳು ನಗೆ : ಹೊಸ ರೀತಿ, ಹೊಸ ಬಗೆ
ನಿರ್ದೇಶಕ ಯೋಗರಾಜ್ ಭಟ್ಟರು ತಮ್ಮ ಸಿನೆಮಾಗಳಲ್ಲಿ ಫಿಲಾಸಫಿ ಜಾಸ್ತಿ ಹೇಳ್ತಾರೆ ಅನ್ನೋದು ನೋಡುಗರ ಕಂಪ್ಲೇಟ್ ಮತ್ತು ಕಾಂಪ್ಲಿಮೆಂಟ್. ಭಟ್ಟರ ಮಾತುಗಳನ್ನು ಅರ್ಥ ಮಾಡಿಕೊಳ್ಳುವವರು ಮೆಚ್ಚಿಕೊಂಡರೆ ಇತರರು ಗೊಂದಲಕ್ಕೀಡಾಗುತ್ತಿದ್ದರು. ಸಿನೆಮಾ ಸರಳವಾಗಿದ್ದರೆ ಚೆನ್ನ, ಅಷ್ಟೊಂದೆಲ್ಲಾ ಹೇಳೋದು ಬೇಕಿರಲಿಲ್ಲ ಎಂದು ಒಂದಷ್ಟು ಪ್ರೇಕ್ಷಕರು ಮೂಗು ಮುರಿಯುತ್ತಿದ್ದರು. ಈಗ ‘ಮುಗುಳು ನಗೆ’ಯಲ್ಲಿ ಭಟ್ಟರು ಮಾತು ಕಡಿಮೆ ಮಾಡಿದ್ದಾರೆ. ಫಿಲಾಸಫಿ ಹೇಳುವ ಅತಿಯಾದ ಮಾತುಗಳಿಲ್ಲ. ‘ನೀವೇ ಅರ್ಥ ಮಾಡ್ಕೊಳ್ರಿ’ ಎಂದು ಅವರು ನೋಡುಗರಿಗೇ ಬಿಟ್ಟಿದ್ದಾರೆ. ಹಾಗಾಗಿ ಇದು ಅವರ ಮಾದರಿಗಿಂತ ಕೊಂಚ ಭಿನ್ನ ಎನಿಸಿಕೊಂಡಿದೆ. ಪ್ರೇಮ್ಕಹಾನಿಯ ಭಿನ್ನ ಆಯಾಮ ಮತ್ತು ಫ್ರೆಶ್ನೆಸ್ನಿಂದಾಗಿ ನೋಡುಗರಿಗೆ ಇಷ್ಟವಾಗುತ್ತದೆ.
ಸಾಮಾನ್ಯವಾಗಿ ಭಟ್ಟರ ಹಿಂದಿನ ಎಲ್ಲಾ ಸಿನೆಮಾಗಳಲ್ಲಿ ಚಿತ್ರದ ಹೀರೋ ಹೆಚ್ಚು ಓದಿಕೊಳ್ಳದ, ಉಡಾಫೆ ವ್ಯಕ್ತಿತ್ವದವನೇ ಆಗಿರುತ್ತಿದ್ದ. ಇದಕ್ಕೆ ಅಪವಾದ ಎನ್ನುವಂತೆ ಈ ಚಿತ್ರದಲ್ಲಿ ಪುಲಕೇಶಿ (ಗಣೇಶ್) ಡಿಸ್ಟಿಂಕ್ಷನ್ ವಿದ್ಯಾರ್ಥಿ. ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಆತ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾವೇಶಕ್ಕೆ ತೆರಳುವುದರೊಂದಿಗೆ ಸಿನೆಮಾ ಶುರುವಾಗುತ್ತದೆ. ಅಲ್ಲೊಂದಿಷ್ಟು ತರ್ಲೆಗಳೊಂದಿಗೆ ಮೊದಲ ಹುಡುಗಿಯ ಪರಿಚಯ. ಮುಂದೆ ಪುಲಕೇಶಿ ಬದುಕಿನಲ್ಲಿ ಮತ್ತೆ ಮೂರು ಹುಡುಗಿಯರು ಬಂದು ಹೋಗುತ್ತಾರೆ. ಈ ಸಂಬಂಧಗಳ ಮೂಲಕ ನಿರ್ದೇಶಕರು ಪ್ರೀತಿಯನ್ನು ವ್ಯಾಖ್ಯಾನಿಸುತ್ತಾ ಹೋಗುತ್ತಾರೆ.
ಪ್ರೀತಿಯನ್ನು ತಮ್ಮದೇ ಆದ ಶೈಲಿಯಲ್ಲಿ ವ್ಯಾಖ್ಯಾನಿಸುವುದು ಯೋಗರಾಜ್ ಭಟ್ಟರ ಶೈಲಿ. ಅಲ್ಲಿ ಅತಿಯಾದ ಲಾಜಿಕ್ ಹುಡುಕುವಂತಿಲ್ಲ. ತರ್ಲೆ ಮಾತು, ಕೆಲವು ರೂಪಕಗಳೊಂದಿಗೆ ಕೊಂಚ ನಾಟಕೀಯ ಎನ್ನುವಂತಹ ಸನ್ನಿವೇಶಗಳನ್ನು ಸೃಷ್ಟಿಸುವುದೂ ಇದೆ. ‘ಮುಗುಳು ನಗೆ’ಯಲ್ಲೂ ಇಂತಹ ಸಂದರ್ಭಗಳು ಹಾಸುಹೊಕ್ಕಾಗಿವೆ. ಭಟ್ಟರು ಇಲ್ಲಿ ತಮ್ಮ ಮಾದರಿಯನ್ನಿಟ್ಟುಕೊಂಡೇ ಹೊಸತನ ತಂದಿದ್ದಾರೆ. ಮುದ್ದಾದ ಸನ್ನಿವೇಶಗಳನ್ನು ಹೊಸೆದು ಪ್ರೇಕ್ಷಕರಿಗೆ ಪ್ರೀತಿಯ ಬಗೆಯನ್ನು ಹೇಳುತ್ತಾರೆ. ಈ ವಿಶಿಷ್ಟ ಅನುಭವವಕ್ಕಾಗಿ ನೀವು ಥಿಯೇಟರ್ಗೆ ಹೋಗಿ ಸಿನೆಮಾ ನೋಡಬೇಕು.
ಮಳೆ ಹುಡುಗ ಗಣೇಶ್ ಚಿತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ. ಅವರದ್ದು ಪ್ರೌಢ ಅಭಿನಯ. ಹತ್ತು ವರ್ಷಗಳ ಹಿಂದೆ ಮುಂಗಾರು ಮಳೆ’ಯ ಗಣೇಶ್ರಲ್ಲಿದ್ದ ತುಂಟ ನಗು ಇಲ್ಲಿಯೂ ಇದೆ. ಜೊತೆಗೆ ಪ್ರಬುದ್ಧ ನಟನೆಯೊಂದಿಗೆ ಅವರು ಇಷ್ಟವಾಗುತ್ತಾರೆ. ನಾಲ್ವರು ನಾಯಕಿಯರು ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೆಯಾಗಿದ್ದು ನಿರ್ದೇಶಕರು ಎಲ್ಲರಿಂದ ಉತ್ತಮ ನಟನೆ ಹೊರತೆಗೆದಿದ್ದಾರೆ. ಹೀರೋನ ಗೆಳೆಯರ ಹಾಸ್ಯ ಆಗಾಗ ಚಿತ್ರಕಥೆಯನ್ನು ಚುರುಕಾಗಿಡುತ್ತದೆ. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂರು ಹಾಡುಗಳು ಮೆಲುಕು ಹಾಕುವಂತಿವೆ. ಸುಜ್ಞಾನ್ ಅವರ ಕ್ಯಾಮರಾ ಕಣ್ಣಿನಲ್ಲಿ ಪಾಂಡಿಚೇರಿ, ಕರಾವಳಿ ಸನ್ನಿವೇಶಗಳು ಅಂದವಾಗಿ ಕಾಣುತ್ತವೆ.
ನಿರ್ದೇಶನ: ಯೋಗರಾಜ್ ಭಟ್,
ನಿರ್ಮಾಣ: ಸಯ್ಯದ್ ಸಲಾಮ್,
ಸಂಗೀತ: ವಿ.ಹರಿಕೃಷ್ಣ,
ಛಾಯಾಗ್ರಾಹಕ: ಸುಜ್ಞಾನ್,
ತಾರಾಗಣ: ಗಣೇಶ್, ಅಪೂರ್ವ ಅರೋರಾ, ನಿಖಿತಾ ನಾರಾಯಣ್, ಆಶಿಕಾ ರಂಗನಾಥ್, ಅಮೂಲ್ಯ, ಅನಂತನಾಗ್, ಅಚ್ಯುತ್ ಕುಮಾರ್ ಮತ್ತಿತರರು.
ರೇಟಿಂಗ್ - *** 1/3