ಪೈಲ್ವಾನ್ ಕಿಚ್ಚ
ಸ್ಯಾಂಡಲ್ವುಡ್ನಲ್ಲಿ ಈ ವರ್ಷ ಸೂಪರ್ಹಿಟ್ ಚಿತ್ರಗಳ ಸಾಲಿಗೆ ಸೇರಿದ ಬೆರಳೆಣಿಕೆಯ ಚಿತ್ರಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಕೂಡಾ ಒಂದು. ಇದೀಗ ಹೆಬ್ಬುಲಿ ನಿರ್ದೇಶಕ ಕೃಷ್ಣ ಅವರು ಕಿಚ್ಚ ಸುದೀಪ್ನನ್ನು ‘ಪೈಲ್ವಾನ್’ ಆಗಿ ಆಖಾಡಕ್ಕಿಳಿಸುತ್ತಿದ್ದಾರೆ. ಹೌದು. ಕೃಷ್ಣ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಸುದೀಪ್ ಓರ್ವ ವೃತ್ತಿಪರ ಬಾಕ್ಸರ್ ಆಗಿ ಮಿಂಚಲಿದ್ದಾರೆ. ‘ಪೈಲ್ವಾನ್’ನ ಪೋಸ್ಟರ್ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಭಾರೀ ಥ್ರಿಲ್ ಉಂಟು ಮಾಡಿದೆ.
ಸ್ಯಾಂಡಲ್ವುಡ್ನಲ್ಲಿ ಕ್ರೀಡಾ ಹಿನ್ನೆಲೆಯ ಕಥಾವಸ್ತುವಿನ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿರುವುದು ಇದೇ ಮೊದಲ ಸಲವಾಗಿದೆ. ‘ಪೈಲ್ವಾನ್’ ಚಿತ್ರದ ತನ್ನ ಬಾಕ್ಸರ್ ಪಾತ್ರವು ನೈಜವಾಗಿ ಮೂಡಿಬರುವ ಉದ್ದೇಶದಿಂದ ಸುದೀಪ್, ಬಾಕ್ಸಿಂಗ್ನಲ್ಲಿ ತರಬೇತಿ ಕೂಡಾ ಪಡೆಯುತ್ತಿದ್ದಾರೆ.
ಕುತೂಹಲಕರವೆಂದರೆ ನಿರ್ದೇಶಕ ಕೃಷ್ಣ ಈ ಚಿತ್ರದ ಮೂಲಕ ತನ್ನದೇ ಆದ ಚಿತ್ರನಿರ್ಮಾಣ ಸಂಸ್ಥೆಯನ್ನು ಕೂಡಾ ಆರಂಭಿಸುತ್ತಿದ್ದಾರೆ. ಅವರ ಪತ್ನಿ ಸ್ವಪ್ನಾ, ‘ಪೈಲ್ವಾನ್’ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ.
ಈ ನಡುವೆ ಸುದೀಪ್, ಪ್ರೇಮ್ ನಿರ್ದೇಶನದ ‘ವಿಲನ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಅವರು ‘ಪೈಲ್ವಾನ್’ ಹಾಗೂ ಕೋಟಿಗೊಬ್ಬ-3 ಚಿತ್ರಗಳಿಗೆ ಏಕಕಾಲದಲ್ಲಿ ಬಣ್ಣ ಹಚ್ಚಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲೂ ನಟಿಸುತ್ತಿರುವ ಸುದೀಪ್ ಕೈಯಲ್ಲೀಗ ಕೈತುಂಬಾ ಚಿತ್ರಗಳಿವೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈ ರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಅವರು ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.