ರಾತ್ರಿ ನಿರ್ಬಂಧ ಮುಂದುವರಿಕೆಗೆ ಮಾಜಿ ಶಾಸಕ ಜೆ.ಆರ್.ಲೋಬೊ ಆಕ್ಷೇಪ
ಜೆ.ಆರ್.ಲೋಬೊ
ಮಂಗಳೂರು, ಆ.3: ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಹತ್ಯೆಯ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಜಿಲ್ಲಾಡಳಿತ ವಿಧಿಸಿದ ರಾತ್ರಿ ನಿರ್ಬಂಧವನ್ನು ಮುಂದುವರಿಸಿರುವ ಕ್ರಮಕ್ಕೆ ಮಾಜಿ ಶಾಸಕ ಜೆ.ಆರ್. ಲೋಬೊ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೋಮು ಸೂಕ್ಷ್ಮ ಪರಿಸ್ಥಿತಿ ಅವಲಂಬಿಸಿ ಇಂತಹ ಕ್ರಮಗಳ ಮೂಲಕ ಹೆಚ್ಚಿನ ಗಲಭೆಯಾಗದಂತೆ ತಡೆಯುವುದು ಸರಿ. ಆದರೆ ಇದನ್ನು ಒಂದೆರೆಡು ದಿನಕ್ಕೆ ಸೀಮಿತಗೊಳಿಸಬೇಕೇ ವಿನಃ ಪುನಃ ಪುನಃ ಅವಧಿ ವಿಸ್ತರಿಸಬಾರದು. ಮಂಗಳೂರಿನ ಪರಿಸ್ಥಿತಿಯನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ನಿಭಾಯಿಸಬೇಕು. ಹತ್ತಾರು ದಿನ ಹೀಗೆ ನಿರ್ಬಂಧ ಮುಂದುವರಿಸಿದರೆ ಜನಸಾಮಾನ್ಯರಿಗೆ ಅಪಾರ ನಷ್ಟವಾಗಲಿದೆ. ಕೋವಿಡ್ ಬಳಿಕ ಚೇತರಿಸುತ್ತಿರುವ ಆರ್ಥಿಕ ವ್ಯವಹಾರಕ್ಕೆ ಇದು ದೊಡ್ಡ ಹೊಡೆತ ನೀಡುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳು, ಸೆಲೂನ್ ಟೇಲರ್, ಬ್ಯೂಟಿ ಪಾರ್ಲರ್, ಕ್ಯಾಂಟೀನ್, ದಿನಗೂಲಿ ಕೆಲಸ ಮಾಡುವವರಿಗೆ ತುಂಬಾ ಕಷ್ಟವಾಗುತ್ತದೆ ಎಂದು ಜೆ.ಆರ್.ಲೋಬೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story