ಕತರ್: ಕೆಎಂಸಿಎ ವತಿಯಿಂದ 62ನೆ ಕರ್ನಾಟಕ ರಾಜ್ಯೋತ್ಸವ ಆಚರಣೆ
ದೋಹಾ, ನ.12: ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ (ಕೆಎಂಸಿಎ) ಇತ್ತೀಚಿಗೆ ಇಲ್ಲಿಯ ಇಂಡಿಯನ್ ಕಲ್ಚರ್ ಸೆಂಟರ್ನ ಅಶೋಕ ಹಾಲ್ನಲ್ಲಿ 62ನೆ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು.
ಮಂಗಳೂರಿನ ಎಸ್ಎಂಆರ್ ಬಿಲ್ಡರ್ಸ್ ಆ್ಯಂಡ್ ಪ್ರಮೋಟರ್ಸ್ನ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದು, ಕೆಎಂಸಿಎ ಸ್ಥಾಪಕ ಅಧ್ಯಕ್ಷ ಸೈಯದ್ ಅಬ್ದುಲ್ ಹೈ ಅವರು ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಹಾಜಿ ಎಸ್.ಎಂ.ರಶೀದ್ ಅವರನ್ನು ಸನ್ಮಾನಿಸಲಾಯಿತು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಭವ್ಯ ಸಮಾರಂಭಕ್ಕೆ ತನ್ನನ್ನು ಆಹ್ವಾನಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸೈಯದ್ ಅಬ್ದುಲ್ ಹೈ ಅವರು ಕೆಎಂಸಿಎದ ವಾರ್ಷಿಕ ಸಂಚಿಕೆ ‘ಪ್ರಗತಿ’ಯ ಐದನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಎಲೆಮರೆಯ ಕಾಯಿಗಳಂತೆ ನಿಸ್ಪೃಹವಾಗಿ ಸೇವೆ ಸಲ್ಲಿಸುವ ಸಮುದಾಯದ ನಾಯಕರಿಗೆ ವಿಶೇಷ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸುವ ಕೆಎಂಸಿಎ ಪರಿಪಾಠದಂತೆ ಅಲಿ ಬಿನ್ ಅಲಿ ಗ್ರೂಪ್ನ ಮಾರ್ಕೆಟಿಂಗ್ ಮ್ಯಾನೇಜರ್ ಕಜೆತಾನ್ ನೆರಿ ಅಲ್ಫೋನ್ಸೊ, ಆಂತರಿಕ ಸಚಿವಾಲಯದ ಉದ್ಯೋಗಿ ಲಿಗೋರಿಯೊ ಫ್ರಾನ್ಸಿಸ್ ಎಸ್ಟ್ರೋಸಿಯೊ ಮತ್ತು ರಿಚರ್ಡ್ ಜರ್ನಿಸ್ ಅವರಿಗೆ ಈ ವರ್ಷದ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳಾಗಿ ರವಿ ಶೆಟ್ಟಿ, ಸಂಜಯ ಕುದ್ರಿ, ಎಚ್.ಕೆ.ಮಧು, ಅರವಿಂದ ಪಾಟೀಲ, ನವನೀತ್ ಶೆಟ್ಟಿ, ದೀಪಕ ಶೆಟ್ಟಿ, ನಝೀರ್ ಪಾಷಾ, ಅನಿಲ ಬೋಳೂರ, ನಾಗೇಶ ರಾವ್, ಸೀತಾರಾಮ ಶೆಟ್ಟಿ, ರಾಮಚಂದ್ರ ಶೆಟ್ಟಿ, ಸುಬ್ರಮಣ್ಯ, ಮಹೇಶ ಗೌಡ, ಇಕ್ಬಾಲ್ ಮನ್ನಾ, ಮಂಜುನಾಥ, ವೀರೇಶ ಮಣ್ಣಂಗಿ, ಇಲ್ಯಾಸ್ ಬ್ಯಾರಿ, ದಿವಾಕರ ಪೂಜಾರಿ, ಅಸ್ಮತ್ ಅಲಿ ಮತ್ತು ಹಬೀಬುನ್ ನಬಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾಫಖೀರ್ ಫಯಾಝ್ ಅಹ್ಮದ್ ಅವರ ಕಿರಾತ್ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕೆಂಎಂಸಿಎ ಅಧ್ಯಕ್ಷ ಅಬ್ದುಲ್ಲಾ ಮೋನು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಝಾಕಿರ್ ಅಹ್ಮದ್ ಮತ್ತು ಹಸನ್ ನಿಹಾಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕರ್ನಾಟಕದ ಕಲಾವಿದರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.