ನ. 24ರಂದು ದುಬೈಯಲ್ಲಿ ಕನ್ನಡ ರಾಜ್ಯೋತ್ಸವ
ದುಬೈ, ನ. 15: ನಮ್ಮ ಮಣ್ಣಿಗೆ ನಮ್ಮ ಗೌರವ ಎಂಬ ಶೀರ್ಷಿಕೆಯೊಂದಿಗೆ ಕನ್ನಡಿಗರ ದುಬೈ ಸಂಘವು ನ. 24ರಂದು ಜುಮೇರಾ ವಿಲೇಜಿನ ಜೆ ಎಸ್ ಎಸ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಿದೆ.
ಕಾರ್ಯಕ್ರಮದಲ್ಲಿ ಹಲವು ಕವಿಗಳು, ಲೇಖಕರು, ಚಿಂತಕರು ಹಾಗೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಘದ ಅಧ್ಯಕ್ಷ ವೀರೇಂದ್ರ ಬಾಬು ಅವರ ಅಧ್ಯಕ್ಷತೆಯಲ್ಲಿ ಅಂದು ಸಂಜೆ 6 ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ದುಬೈ ಸಂಘವು ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಬರುತ್ತಿದ್ದು, ಈ ವರ್ಷ ಕರ್ನಾಟಕ ವಿದ್ಯಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿರುವ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಿದೆ.
ಅತಿಥಿಗಳಾಗಿ ಎನ್ ಎಮ್ ಸಿ ಗ್ರೂಪಿನ ಚೇರ್ಮ್ಯಾನ್, ಉದ್ಯಮಿ ಡಾ ಬಿ ಆರ್ ಶೆಟ್ಟಿ, ಉದ್ಯಮಿ ಎಸ್ ಎಸ್ ಗಣೇಶ್, ಹಾಸ್ಯ ಚಿತ್ರ ನಟ ನಿರೂಪಕ ಮಾಸ್ಟರ್ ಆನಂದ್, ಗಾಯಕಿ ಅಂಜಲಿ ಹಳ್ಳಿಯಾಲ್, ಗಾಯಕಿ ವೀಣಾ ಹಾನಗಲ್ಮುಂತಾದವರು ಭಾಗವಹಿಸಲಿದ್ದಾರೆ, ನಂತರ ಯು ಎ ಇ ಯಲ್ಲಿ ನೆಲೆಸಿರುವ ಮಕ್ಕಳಿಂದ ಕನ್ನಡ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವೀರೇಂದ್ರ ಬಾಬು , ಮಾಜಿ ಅಧ್ಯಕ್ಷರುಗಳಾದ ಉಮಾ ವಿಧ್ಯಾದರ್, ಸದನ್ ದಾಸ್, ಮಲ್ಲಿಕಾರ್ಜುನ ಗೌಡ, ಸಂಘದ ಸದಸ್ಯರು ಗಳಾದ ದೀಪಕ್ ಸೋಮಶೇಖರ್, ಬಾಲಕೃಷ್ಣ, ಮಮತಾ ರಾಘವೇಂದ್ರ , ವಿಜಯ ಶಿವರುದ್ರಪ್ಪ, ಅರುಣ್ ಕುಮಾರ್ , ಶ್ರೀನಿವಾಸ್ ಅರಸ್, ಚಂದ್ರಕಾಂತ್ ಮತ್ತು ರಫೀಕಲಿ ಕೊಡಗು ಮುಂತಾದವರು ಉಪಸ್ಥಿತರಿದ್ದರು.