ಉದ್ಯೋಗ ಸೃಷ್ಟಿಯ ಬದಲು ದೇಶದಲ್ಲಿ ದ್ವೇಷ ಬಿತ್ತುವ ಶಕ್ತಿಗಳು ಅಧಿಕಗೊಂಡಿವೆ: ಬಹರೈನ್ ನಲ್ಲಿ ರಾಹುಲ್
"ಭಾರತ ಸ್ವತಂತ್ರವಾಗಿದ್ದರೂ ಅಪಾಯದಲ್ಲಿದೆ"
ಬಹರೈನ್, ಜ.9: ಕೇಂದ್ರ ಸರಕಾರ ದೇಶದ ಜನರನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆಯುತ್ತಿದೆ ಹಾಗೂ ನಿರುದ್ಯೋಗಿ ಯುವಜನತೆಯ ಆಕ್ರೋಶವನ್ನು ಮತೀಯ ವೈಷಮ್ಯದತ್ತ ಹರಿಯುವಂತೆ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಹರೈನ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮುಂದಿನ ಆರು ತಿಂಗಳುಗಳೊಳಗಾಗಿ ಪಕ್ಷದ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳಾಗಲಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.
2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸಲು ಸಶಕ್ತವಾಗುವುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ ಅವರು, ತನ್ನ ಪಕ್ಷಕ್ಕೆ ಈ ಸಾಮರ್ಥ್ಯ ಮತ್ತು ಶಕ್ತಿ ಇದೆ ಎಂದರು. ಕೇಸರಿ ಪಕ್ಷ ತನ್ನ ಭದ್ರಕೋಟೆಯಾಗಿದ್ದ ಗುಜರಾತ್ ರಾಜ್ಯದಲ್ಲಿ ಈ ಬಾರಿ ಕಷ್ಟ ಪಟ್ಟು ಜಯ ಸಾಧಿಸಿದೆ ಎಂದು ಅವರು ಹೇಳಿದರು.
ಗ್ಲೋಬಲ್ ಆರ್ಗನೈಝೇಶನ್ ಆಫ್ ಪೀಪಲ್ ಆಫ್ ಇಂಡಿಯನ್ ಒರಿಜಿನ್ ಆಯೋಜಿಸಿದ್ದ ಈ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗಾವಕಾಶಗಳ ಸೃಷ್ಟಿ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳು ಹಾಗೂ ಶಿಕ್ಷಣ ವ್ಯವಸ್ಥೆ ತಮ್ಮ ಆದ್ಯತೆಯಾಗಿದೆ ಎಂದರು.
ನಮ್ಮ ದೇಶ ಗಂಭೀರ ಸಮಸ್ಯೆಯೆದುರಿಸುತ್ತಿದೆ. ಅದನ್ನು ನೀವು ಪರಿಹರಿಸಬಲ್ಲಿರಿ. ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಬದಲು ದೇಶದಲ್ಲಿ ದ್ವೇಷ ಬಿತ್ತುವ ಶಕ್ತಿಗಳು ಅಧಿಕಗೊಂಡಿವೆ. ಭಾರತ ಸ್ವತಂತ್ರವಾಗಿದ್ದರೂ ಅಪಾಯದಲ್ಲಿದೆ. ಈಗ ಭಾರತದಲ್ಲಿ ಬದಲಾವಣೆ ತರಲು ನಾನು ನಿಮ್ಮ ಸಹಕಾರ ಕೋರುತ್ತಿದ್ದೇನೆ ಎಂದು ರಾಹುಲ್ ಹೇಳಿದರು.