ನ.9ರಂದು ‘ಕನ್ನಡಿಗರು ದುಬೈ’ಯಿಂದ ಕನ್ನಡ ರಾಜ್ಯೋತ್ಸವ
ದುಬೈ, ನ.8: ಕನ್ನಡಿಗರು ದುಬೈ ಸಂಘಟನೆಯ ವತಿಯಿಂದ ಪ್ರೇಶಿಯಸ್ ಪಾರ್ಟಿಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ.9ರಂದು 5:30ಕ್ಕೆ ದುಬೈಯ ಅಲ್ ಕೂಝ್ನಲ್ಲಿರುವ ಕ್ರೆಡೆನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜ್ಯೋತಿಷಿ ರವಿಶಂಕರ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡಿಗರು ದುಬೈಯ ಅಧ್ಯಕ್ಷ ಸದನ್ ದಾಸ್ ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಸಾಧನೆಗಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವರಿಗೆ ‘ಕನ್ನಡ ರತ್ನ’ ಪ್ರಶಸ್ತಿ, ಕಲಾ ಕ್ಷೇತ್ರಕ್ಕೆ ನೀಡಿರುವ ಸೇವೆಗಾಗಿ ಖ್ಯಾತ ಕನ್ನಡ ಚಿತ್ರನಟ ವಿ.ರವಿಚಂದ್ರನ್ ಅವರಿಗೆ ‘ಕನ್ನಡ ಕಲಾರತ್ನ’ ಹಾಗೂ ಕನ್ನಡ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವ ಎನ್ಆರ್ಐ ಉದ್ಯಮಿ ಎಂ ಸ್ಕ್ವೇರ್ ಎಂಜಿನಿಯರಿಂಗ್ ಸಂಸ್ಥೆ ಮಾಲಕ ಮುಸ್ತಫರಿಗೆ ‘ಕನ್ನಡ ಕೌಸ್ತುಭ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಇದೇ ಸಂದರ್ಭ ಸಮಾಜ ಸೇವಕ ಮಂಗಳೂರಿನ ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಹಾಗೂ ನಟಿ, ಖ್ಯಾತ ಕನ್ನಡ ಕಾರ್ಯಕ್ರಮ ನಿರೂಪಕಿ ಅಪರ್ಣಾರನ್ನು ಸನ್ಮಾನಿಸಿ, ಅಭಿನಂದಿಸಲಾಗುತ್ತದೆ.
ಸಭಾ ಕಾರ್ಯಕ್ರಮದ ಬಳಿಕ ಹಾಸ್ಯ ಕಲಾವಿದ ನಾಗರಾಜ್ ಕೋಟೆ ಅವರಿಂದ ಕಾರ್ಯಕ್ರಮ ಹಾಗೂ ಯುನೈಟೆಡ್ ಅರಬ್ ಎಮಿರೇಟ್ನಲ್ಲಿ ನೆಲೆಸಿರುವ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟನೆ ತಿಳಿಸಿದೆ.