ಇಂಡಿಯನ್ ಪ್ರವಾಸಿ ಫೋರಂ ನಿಂದ "ಪೈಗಾಮೆ ರಸೂಲ್(ಸ.ಅ)"
ಮಸ್ಕತ್, ಡಿ.4 : ಇಂಡಿಯನ್ ಪ್ರವಾಸಿ ಫೋರಂ ಮಸ್ಕತ್-ಒಮಾನ್ ವತಿಯಿಂದ "ಪೈಗಾಮೆ ರಸೂಲ್(ಸ.ಅ)" ಕಾರ್ಯಕ್ರಮವು ಕ್ರಿಸ್ಟಲ್ ಸೂಟ್ ವಾದಿಕಬೀರ್-ಮಸ್ಕತ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ನಾತ್,ಕಿರಾಅತ್, ಆಟೋಟ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು.
ಪರ್ವೇಝ್ ಕಾಟಿಪಳ್ಳ ಮತ್ತು ತಂಡದ ದಫ್ ಕಾರ್ಯಕ್ರಮ ನಡೆಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾತನಾಡಿದ "ರಾಶೀದ್ ಹುಸೈನ್ ಹೈದರಾಬಾದ್, ಪ್ರವಾದಿ ( ಸ.ಅ) ರವರು ತನ್ನ ಬಾಲ್ಯ ಮತ್ತು ಯವ್ವನದಲ್ಲಿ ಕಳೆದ ರೀತಿಯನ್ನು ಅವಲೋಕಿಸುತ್ತಾ ಅವರ ಚರ್ಯೆ,ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯವೆಂದರು.
ಅಲ್ಲದೆ ಅವರ ಅಂದಿನ ಕಾಲಘಟ್ಟದಲ್ಲಿ ಅನಾಗರಿಕ, ಅಂಧಕಾರದಲ್ಲಿ ಮುಳುಗಿದ ಕಠೋರ ವ್ಯಕ್ತಿತ್ವ ಮನಸ್ಸನ್ನು ಹೊಂದಿಕೊಂಡಂತಹ ಸಮಾಜವನ್ನು ಸೌಮ್ಯ ಸ್ವಭಾವದಿಂದ ತನ್ನ ಜವಾಬ್ದಾರಿ ಅರಿತು ,ಮುಂದುವರಿದು ಆ ಕಠೋರ ಸಮಾಜದ ಮನಗಳನ್ನು ಪರಿವರ್ತಿಸುವಲ್ಲಿ ಸಫಲರಾಗಿದ್ದನ್ನು ನೈಜ ಚರಿತ್ರೆಯ ಚಿತ್ರಣದೊಂದಿಗೆ ನೆನಪಿಸಿದರು.
ಆ ಸಮಯದಲ್ಲಿ ತನಗೆ ಎದುರಾದಂತಹ ಕಷ್ಟ, ಅಪಮಾನಗಳನ್ನು ಸಹಿಸಿದರೂ ತನ್ನ ಅನುಯಾಯಿಗಳಿಗೆ ಯಾವುದೇ ದೈಹಿಕ, ಮಾನಸಿಕ ಹಲ್ಲೆಯನ್ನು ಸಹಿಸದೆ ಅದನ್ನು ಎದುರಿಸುತ್ತಾ ತನ್ನ ಅನುಯಾಯಿಗಳನ್ನು ರಕ್ಷಿಸಿದ ರೀತಿಯು ಇಂದಿನ ಸಮಾಜವು ಬಯಸುತ್ತಿದೆ ಎಂಬ ಮಾತನ್ನು ಒತ್ತಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಹಮ್ಮದ್ ಅನ್ವರ್ ಮೂಡಬಿದ್ರೆ , ಇಂದಿನ ಪರಿಸ್ಥಿತಿಯಲ್ಲಿ ಇಸ್ಲಾಮಿನ ಶರೀಅತ್ ನಲ್ಲಿ ಮೂಗು ತೂರಿಸುತ್ತಿರುವ ಒಂದು ಗುಂಪು ಆಳ್ವಿಕೆ ನಡೆಸುತ್ತಿರುವ ಸರಕಾರದೊಳಗೆ ನುಸುಳಿ ತಮ್ಮ ಮೊಂಡು ಧ್ಯೇಯದ ಯಶಸ್ಸನ್ನು ಸಲೀಸಾಗಿ ಕಾರ್ಯರೂಪಗೊಳಿಸುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಿ ಭಯದ ವಾತಾವರಣವನ್ನು ಸೃಷ್ಟಿಸುತ್ತಾ, ದೈನಂದಿನ ಜೀವನೋಪಾಯಕ್ಕೂ ಅಡ್ಡಿಯಾಗುತ್ತಿರುವುದಾಗಿದೆ ಎಂದರು.
ಸೋಶಿಯಲ್ ಫೋರಂ ಕರ್ನಾಟಕ ಚಾಪ್ಟರ್ ಉಪಾಧ್ಯಕ್ಷ ಸೈಯ್ಯದ್ ಮೊಹಿದೀನ್ ಸಾಹೇಬ್ ಸಾಸ್ತಾನ್, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹಮಾನ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಷನ್ ಒಮಾನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್, ಗಂಗೊಳ್ಳಿ ಜಮಾಅತ್ ಒಮಾನ್ ಅಧ್ಯಕ್ಷ ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.
ನೂರ್ ಮುಹಮ್ಮದ್ ಪಡುಬಿದ್ರಿ ಸ್ವಾಗತಿಸಿದರು, ಝಕರಿಯಾ ಬಪ್ಪಳಿಗೆ ಧನ್ಯವಾದಗೈದರು.
ಉಸ್ಮಾನ್ ಮೈಸೂರ್ ಮತ್ತು ಹನೀಫ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು, ಅನ್ಸಾರ್ ಕಾಟಿಪಳ್ಳ ಉಸ್ತುವಾರಿ ವಹಿಸಿದ್ದರು.