ಪಕ್ಷಿಯನ್ನು ರಕ್ಷಿಸಲು ಯೋಜನೆಯ ಸ್ಥಳವನ್ನೇ ಬದಲಾಯಿಸಿದರು !
ದುಬೈ, ಎ.24: ಸಂಯುಕ್ತ ಅರಬ್ ಸಂಸ್ಥಾನದ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಹಾಗೂ ಅಬುಧಾಬಿಯ ರಾಜಕುಮಾರ ಶೇಕ್ ಮುಹಮ್ಮದ್ ಬಿನ್ ಝಯೆದ್ ಅಲ್ ನಹ್ಯಾನ್ ಅವರು ಜತೆಯಾಗಿ ದುಬೈ ನಗರದ ನಿರ್ಮಾಣ ಸ್ಥಳವೊಂದರಲ್ಲಿ ಹಕ್ಕಿಯೊಂದನ್ನು ಸಂರಕ್ಷಿಸುವ ಸಲುವಾಗಿ ಯೋಜನೆಯ ಸ್ಥಳವನ್ನೇ ಬದಲಾಯಿಸಿ ಮಾನವೀಯತೆ ಮೆರೆದಿದ್ದಾರೆ. ಈ ಬಗೆಗಿನ ವೀಡಿಯೋ ವೈರಲ್ ಆಗಿದ್ದು ಹಲವಾರು ಮಂದಿಯ ಹೃದಯ ಗೆದ್ದಿದೆ.
ಇಬ್ಬರೂ ಕಳೆದ ವಾರ ಅರಣ್ಯ ಪ್ರದೇಶವೊಂದಕ್ಕೆ ತೆರಳಿದ್ದಾಗ ಅಲ್ಲಿ ಹೌಬರ ಬುಸ್ಟರ್ಡ್ ಹಕ್ಕಿಯೊಂದು ಯೋಜನೆಯ ಸ್ಥಳವೊಂದರಲ್ಲಿ ತತ್ತಿಯಿಡುತ್ತಿರುವುದನ್ನು ಗಮನಿಸಿದ್ದಾರೆ. ಅವರು ಕೂಡಲೇ ಯೋಜನೆಯನ್ನು ಹತ್ತಿರದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಹೇಳಿ ಹಕ್ಕಿ ಹಾಗೂ ಅದರ ತತ್ತಿಗಳನ್ನು ರಕ್ಷಿಸಿದ್ದಾರೆ.
ಈ ವೀಡಿಯೋವನ್ನು ಉಪ ಪ್ರಧಾನಿ ಹಾಗೂ ಆಂತರಿಕ ವ್ಯವಹಾರಗಳ ಸಚಿವರಾಗಿರುವ ಲೆ. ಜ.ಶೇಖ್ ಸೈಫ್ ಬಿನ್ ಝಯೆದ್ ಅಲ್ ನಹ್ಯಾನ್ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಮೂರೇ ಗಂಟೆಗಳಲ್ಲಿ ಈ ವೀಡಿಯೋವನ್ನು 21,000 ಮಂದಿ ಅವೀಕ್ಷಿಸಿದ್ದಾರೆ. ನೂರಾರು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ.