ದುಬೈನಲ್ಲಿ ಎ.28ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ‘ಕರ್ನಾಟಕ ಎನ್ನಾರೈ ಫೋರಂ-ಯುಎಇ’ ಉದ್ಘಾಟನೆ
ದುಬೈ,ಎ.25: ಕರ್ನಾಟಕ ಸರಕಾರದ ಎನ್ನಾರೈ ಫೋರಂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಇಲ್ಲಿ ‘ಕರ್ನಾಟಕ ಎನ್ನಾರೈ ಫೋರಂ-ಯುಎಇ’ಅನ್ನು ಆರಂಭಿಸಲಿದೆ.
ಎ.28ರಂದು ಅಪರಾಹ್ನ ಮೂರು ಗಂಟೆಗೆ ಇಲ್ಲಿಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ‘ಕರ್ನಾಟಕ ಎನ್ನಾರೈ ಫೋರಂ-ಯುಎಇ’ಅನ್ನು ಉದ್ಘಾಟಿಸಲಿದ್ದು, ಆಹಾರ ಸಚಿವ ಯು.ಟಿ.ಖಾದರ್, ಡಾ.ಆರತಿ ಕೃಷ್ಣ ಮತ್ತು ಕರ್ನಾಟಕ ಸರಕಾರದ ರಾಜತಾಂತ್ರಿಕ ರನ್ನೊಳಗೊಂಡ ನಿಯೋಗ ಈ ಸಂದರ್ಭದಲ್ಲಿ ಉಪಸ್ಥಿತವಿರಲಿದೆ.
ಕಾನ್ಸುಲ್ ಜನರಲ್ ಆಫ್ ಇಂಡಿಯಾ ವಿಪುಲ್ ಮತ್ತು ‘ಕರ್ನಾಟಕ ಎನ್ನಾರೈ ಫೋರಂ-ಯುಎಇ’ನ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಅವರು ಗೌರವ ಅತಿಥಿಗಳಾಗಿರುತ್ತಾರೆ.
ಐದು ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಅದಕ್ಕೂ ಮುನ್ನ ಎನ್ನಾರೈ ಕನ್ನಡಿಗರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಯುಎಇಯಲ್ಲಿರುವ ವಿವಿಧ ಕನ್ನಡಿಗರ ಸಂಘ-ಸಂಸ್ಥೆಗಳ ನಾಯಕರು, ನೆರೆಯ ಬಹರೀನ್,ಓಮನ್,ಕತರ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳಿಂದ ಉದ್ಯಮ ಕ್ಷೇತ್ರಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾನ್ಸುಲ್ ಕಚೇರಿಯ ಶಿಷ್ಟಾಚಾರದಂತೆ ಕಾರ್ಯಕ್ರಮಕ್ಕೆ ಆಗಮಿಸುವವರು ತಮ್ಮೆಂದಿಗೆ ಎಮಿರೇಟ್ಸ್ ಐಡಿ/ಪಾಸ್ಪೋರ್ಟ್ ಮತ್ತು ಅಧಿಕೃತ ಆಹ್ವಾನ ಪತ್ರಿಕೆಯನ್ನು ಹೊಂದಿರುವಂತೆ ಸೂಚಿಸಲಾಗಿದೆ. ಅಧಿಕೃತ ಆಹ್ವಾನ ಪತ್ರಕ್ಕಾಗಿ ಸದನ್ ದಾಸ್ (ದೂರವಾಣಿ: 050 7576238) ಅವರನ್ನು ಸಂಪರ್ಕಿಸಬಹುದಾಗಿದೆ.
‘ಕರ್ನಾಟಕ ಎನ್ನಾರೈ ಫೋರಂ-ಯುಎಇ’
ಉದ್ದೇಶಿತ ‘ಕರ್ನಾಟಕ ಎನ್ನಾರೈ ಫೋರಂ-ಯುಎಇ’ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಕರ್ನಾಟಕ ಸರಕಾರದ ಎನ್ನಾರೈ ಫೋರಂನ ನೂತನ ಶಾಖಾ ಘಟಕವಾಗಿದ್ದು ಪ್ರಮುಖ ಕನ್ನಡಿಗ ನಾಯಕ ಪ್ರವೀಣ ಶೆಟ್ಟಿ ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸರ್ವೋತ್ತಮ ಶೆಟ್ಟಿ, ಜೋಸೆಫ್ ಮಥಿಯಾಸ್, ಡಾ.ಕಾಪು ಮುಹಮ್ಮದ್ ಮತ್ತು ಹರೀಶ ಶೇರಿಗಾರ್ ಅವರು ಉಪಾಧ್ಯಕ್ಷರಾಗಿರುತ್ತಾರೆ. ಪ್ರಭಾಕರ ಅಂಬಲತ್ತರೆ ಅವರು ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ. ಕಾರ್ಯಕಾರಿ ಮಂಡಳಿಯು 25 ಸದಸ್ಯರನ್ನು ಒಳಗೊಂಡಿದೆ.
ಕೆಎನ್ನಾರೈ ಪೋರಂ ಗುರಿ
ಫೋರಂ ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳು ಮತ್ತು ಸಂಶೋಧನೆಗಳಲ್ಲಿ ಹೂಡಿಕೆ ಮಾಡಲು ಎನ್ನಾರೈಗಳನ್ನು ಉತ್ತೇಜಿಸಲಿದೆ. ಜೊತೆಗೆ ಯುಎಇಯಲ್ಲಿರುವ ಕನ್ನಡಿಗರ ಹಿತಾಸಕ್ತಿಗಳ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.