ಗಲ್ಫ್ ಸಂಘರ್ಷ: ಆಹಾರ, ಉದ್ಯೋಗದ್ದೇ ಆತಂಕ
* ಭಾರತೀಯರೂ ಸೇರಿ ವಲಸೆ ಕಾರ್ಮಿಕರಿಗೆ ಸಂಕಷ್ಟ
ದೋಹಾ, ಜೂ.16: ಅಜಿತ್ ಭಾರತೀಯ ಮೂಲದ ಯುವ ಇಲೆಕ್ಟ್ರಿಷಿಯನ್. ಆರು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿ, ವೃತ್ತಿಜೀವನದ ಕನಸು ಕಾಣುತ್ತಿದ್ದರು. ಆದರೆ ಇದೀಗ ಉದ್ಯೋಗ ಹಾಗೂ ದಿನನಿತ್ಯದ ಊಟದ ಬಗ್ಗೆಯೂ ಅವರಿಗೆ ಚಿಂತೆಯಾಗಿದೆ. ಅವರಿಗೆ ಮಾತ್ರವಲ್ಲ. ಕತರ್ನಲ್ಲಿ ವಲಸೆ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಮಂದಿ ಈ ಆತಂಕ ಎದುರಿಸುತ್ತಿದ್ದಾರೆ.
ಉದ್ಯೋಗ ಹಾಗೂ ಈ ದೇಶದಲ್ಲಿ ತಮ್ಮ ವೃತ್ತಿಭವಿಷ್ಯದ ಬಗ್ಗೆ ಮಾತ್ರ ಅವರ ಚಿಂತೆಯಲ್ಲ. ಬದಲು ಗಗನಮುಖಿಯಾಗುತ್ತಿರುವ ಆಹಾರವಸ್ತುಗಳ ಬೆಲೆ ಕೂಡಾ ಅವರನ್ನು ಕಂಗೆಡಿಸಿದೆ. "ಸಮಸ್ಯೆ ಇದೇ ರೀತಿ ಮುಂದುವರಿದರೆ, ನನ್ನಂಥ ಕಾರ್ಮಿಕರು ಅಪಾಯದ ಸ್ಥಿತಿ ಎದುರಿಸಬೇಕಾಗುತ್ತದೆ. ಒಂದೆಡೆ ಆಹಾರದ ಬೆಲೆ ಗಗನಕ್ಕೇರಿದ್ದರೆ ಇನ್ನೊಂದೆಡೆ ಕೆಲಸ ಇಲ್ಲ" ಎಂದು ಅವರು ವಿವರಿಸುತ್ತಾರೆ.
ರಾಜತಾಂತ್ರಿಕ ಸಂಘರ್ಷದಿಂದಾಗಿ ಸೌದಿ ಅರೇಬಿಯಾ ಹಾಗೂ ಮಿತ್ರದೇಶಗಳು ಕತರನ್ನು ಒಂಟಿಯಾಗಿ ಇಡುವ ಮೂಲಕ ದೋಹಾ ಜತೆಗಿನ ಎಲ್ಲ ಸಂಬಂಧ ಕಡಿದುಕೊಂಡಿರುವುದು ಇದಕ್ಕೆ ಕಾರಣ. ಮಾಸಿಕ 1000 ರಿಯಾಲ್ ವೇತನ (275 ಡಾಲರ್ ಅಥವಾ 240 ಯೂರೊ) ಪಡೆಯುವ ಅಜಿತ್ ಆ ಪೈಕಿ 600 ರಿಯಾಲ್ಗಳನ್ನು ಕುಟುಂಬಕ್ಕಾಗಿ ಮನೆಗೆ ಕಳುಹಿಸುತ್ತಾರೆ. ಇನ್ನು ಮುಂದೆ ಅದು ಸಾಧ್ಯವಾಗಬಹುದು ಎಂಬ ನಿರೀಕ್ಷೆ ಅವರಲ್ಲಿ ಉಳಿದಿಲ್ಲ.
"ಸೂಪರ್ ಮಾರ್ಕೆಟ್ಗಳಲ್ಲಿ ಅಕ್ಕಿ, ಟೊಮ್ಯಾಟೊ, ಈರುಳ್ಳಿ ಬೆಲೆ ಹೆಚ್ಚಿದೆ. ಪ್ರತಿ ವಸ್ತುಗಳಿಗೆ ಒಂದು ರಿಯಾಲ್ ಖರ್ಚು ಮಾಡುತ್ತಿದ್ದೆ. ಈಗ ಅದು ದುಪ್ಪಟ್ಟಾಗಿದೆ". 31 ವರ್ಷದ ಈ ವಲಸೆ ಉದ್ಯೋಗಿ ಸಹಜವಾಗಿಯೇ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದರೂ, ಚರ್ಚೆ ಮಾತ್ರ ವಿಶ್ವದ ಶ್ರೀಮಂತ ದೇಶಗಳ ನಡುವಿನ ರಾಜಕೀಯ ಸಂಘರ್ಷ, ಭದ್ರತೆಯಂಥ ವಿಷಯಗಳ ಮೇಲೆ ಕೇಂದ್ರಿತವಾಗಿದೆ. ಇದಕ್ಕೆ ಹೊರತಾಗಿ ಕತರ್ನಲ್ಲಿ ಸುಮಾರು 20 ಲಕ್ಷದಷ್ಟಿರುವ ವಲಸೆ ಕಾರ್ಮಿಕರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂಥದ್ದೇ ಮಬ್ಬು ಚಿತ್ರಣವನ್ನು ಬಾಂಗ್ಲಾದೇಶದ ಅನಿಲ್, ನೂರ್ ಉಲ್ ಇಸ್ಲಾಂ ಹಾಗೂ ಅಬ್ದುಲ್ ಬಾರಿಕ್ ನೀಡುತ್ತಾರೆ. ಮುಸ್ಲಿಮರ ಪವಿತ್ರ ರಮಝಾನ್ ಮಾಸ ಮುಗಿದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂಬ ಆತಂಕ ಅವರದ್ದು.