ಹಜ್ಜಾಜ್ ಗಳ ಸೇವೆ: ಕೆಸಿಎಫ್ ಗೆ 'ಸೌದಿ ಮಿನಿಸ್ಟ್ರಿ ಆಫ್ ಹೆಲ್ತ್' ವತಿಯಿಂದ ಪ್ರಶಂಸನೀಯ ಪತ್ರ
ಮಕ್ಕಾ, ಸೆ. 5: ಹಜ್ಜ್ ಯಾತ್ರಾರ್ಥಿಗಳ ಒಡನಾಡಿಯಾಗಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕಾರ್ಯಕರ್ತರ ಪವಿತ್ರ ಭೂಮಿಯಲ್ಲಿ ದಣಿವರಿಯದೆ ನಡೆಸಿದ ಸೇವೆಯು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಸಿಎಫ್ ಕಾರ್ಯಕರ್ತರ ಹಜ್ಜಾಜಿಗಳ ಸೇವೆಯನ್ನು ಮನಗಂಡು 'ಸೌದಿ ಮಿನಿಸ್ಟ್ರಿ ಆಫ್ ಹೆಲ್ತ್' ಪ್ರಶಂಸನೀಯ ಪತ್ರ ನೀಡಿದ್ದು, ಹಜ್ಜಾಜಿಗಳ ಸೇವೆಗಾಗಿ ಸೌದಿ ಸರಕಾರದಿಂದ ಸತತ ಮೂರನೇ ಬಾರಿ ಪ್ರಶಂಸನೀಯ ಪತ್ರ ಪಡೆದುಕೊಂಡ ಕನ್ನಡಿಗರ ಏಕೈಕ ಸಂಘಟನೆಯಾಗಿದೆ ಕೆಸಿಎಫ್.
ರವಿವಾರ ಮಕ್ಕಾದ ಮಿನಾ ಆಸ್ಪತ್ರೆಯಲ್ಲಿ ಕೆಸಿಎಫ್ ಕಾರ್ಯಕರ್ತರು ಸೌದಿ ಹೆಲ್ತ್ ಮಿನಿಸ್ಟ್ರಿ ಅಧಿಕಾರಿಗಳಿಂದ ಪ್ರಶಂಸನೀಯ ಪತ್ರ ಸ್ವೀಕರಿಸಿದರು. ಈ ಸಂದರ್ಭ ಸೌದಿ ಹೆಲ್ತ್ ಮಿನಿಸ್ಟ್ರಿ ಮಿನಾ ಇದರ ಆಡಳಿತ ನಿರ್ದೇಶಕ ಡಾ. ಖಾಲೀದ್ ಮುಹಮ್ಮದ್ ಶರಾನಿ ಮಾತನಾಡಿ, ದಿನದ 24 ಗಂಟೆಗಳಲ್ಲೂ ಅವಿರತ ಶ್ರಮ ನಡೆಸುತ್ತಿರುವ ಕೆಸಿಎಫ್ ಸ್ವಯಂ ಸೇವಕರ ಸೇವೆಯನ್ನು ಬಣ್ಣಿಸಲು ಅಸಾಧ್ಯ. ನಿಮ್ಮ ಸೇವೆಯಿಂದ ಹಲವಾರು ಹಾಜಿಗಳು ಪ್ರಯೋಜನ ಪಡೆದಿದ್ದು ಸೌದಿ ಹೆಲ್ತ್ ಮಿನಿಸ್ಟ್ರಿ ಹಾಗೂ ಹಾಜಿಗಳ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಈ ವೇಳೆ ಕೆಸಿಎಫ್ ಹೆಚ್.ವಿ.ಸಿ. ವ್ಯವಸ್ಥಾಪಕ ಹನೀಫ್ ಮಂಜನಾಡಿ, ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಸರಳಿಕಟ್ಟೆ, ಕೆಸಿಎಫ್ ಸ್ವಯಂ ಸೇವಕರಾದ ಶಾಹೀದ್, ಆಸೀಫ್ ಮತ್ತಿತರರು ಉಪಸ್ಥಿತರಿದ್ದರು.
ಸೌದಿ ಆರೋಗ್ಯ ಸಚಿವಾಲಯದಿಂದ ಸತತ ಮೂರನೇ ಬಾರಿಯೂ ಪ್ರಶಂಸನೀಯ ಪತ್ರ ಗಳಿಸುವಂತಹ ರೀತಿಯಲ್ಲಿ ಹಜ್ಜಾಜ್ ಗಳ ಸೇವೆಯಲ್ಲಿ ಭಾಗಿ ಯಾದ ಎಲ್ಲಾ ಎಚ್ ವಿ ಸಿ ಕಾರ್ಯಕರ್ತರನ್ನು ಸೌದಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಅಭಿನಂದಿಸಿದ್ದಾರೆ.