ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳದಿಂದ ಕೃಷಿ ಇಲಾಖೆ, ಅಧಿಕಾರಿಗಳ ಮನೆಗಳಿಗೆ ದಾಳಿ
ಬಂಟ್ವಾಳ, ಡಿ. 13: ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇದರ ಮಂಗಳೂರು ಲೋಕಾಯುಕ್ತ ವಿಶೇಷ ತಂಡವು ಬುಧವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೃಷಿ ಇಲಾಖೆ ಹಾಗೂ ಹಲವು ಅಧಿಕಾರಿಗಳ ಮನೆಗಳಿಗೆ ದಾಳಿ ನಡೆಸಿದೆ.
ಬಂಟ್ವಾಳ ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಫ್. ಮಿರಾಂಡ ಅವರ ಬಂಟ್ವಾಳದ ಕಚೇರಿಯ ಮೇಲೆ ದಾಳಿ ನಡೆಸಿದ ಎಸಿಬಿ ತಂಡ, ಬಳಿಕ ಮಂಗಳೂರು ತಾಲೂಕಿನ ಪಕ್ಷಿಕೆರೆ, ತೋಕೂರುನಲ್ಲಿರುವ ಮಿರಾಂಡ ಅವರ ನಿವಾಸದ ಮೇಲೆಯೂ ದಾಳಿ ನಡೆಸಿದೆ.
ವಿವಿಧೆಡೆ ಮಿರಾಂಡಾ ಮಾಡಿರುವ ಆಸ್ತಿಪಾಸ್ತಿಗಳ ಲೆಕ್ಕಾಚಾರ, ಕಚೇರಿ ಕಂಪ್ಯೂಟರ್ನ ಹಾರ್ಡ್ ಡಿಸ್ಕ್ ಪರಿಶೀಲನೆ ಸಹಿತ ಹಲವು ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಇಲ್ಲಿನ ಕೆಲವು ಸಿಬ್ಬಂದಿಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಡಿವೈಎಸ್ಪಿ ಸುಧೀರ್ ಹೆಗ್ಡೆ ಮತ್ತು ಡಿವೈಎಸ್ಪಿ ಗಿರೀಶ್ ನೇತೃತ್ವದ ತಂಡ ಕಾರ್ಯಾಚರಣೆ ಪಾಲ್ಗೊಂಡಿದ್ದರು. ಬಂಟ್ವಾಳ ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಫ್. ಮಿರಾಂಡ ಅವರು ಇನ್ನೂ ಮೂರು ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು, ಕೃಷಿಕರೊಬ್ಬರು ನೀಡಿದ ದೂರಿನ ಹಿನ್ನೆಲೆ ಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.