ಮುಲ್ಕಿ : 40 ಸಾವಿರ ರೂ., ದಾಖಲೆ ಪತ್ರಗಳಿದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
ಮುಲ್ಕಿ,ಜ.15: ಸುಮಾರು 40 ಸಾವಿರ ರೂ. ಸಹಿತ ಅಗತ್ಯ ದಾಖಲೆ ಪತ್ರಗಳಿದ್ದ ಪರ್ಸ್ ಹಿಂದಿರುಗಿಸುವ ಮೂಲಕ ಹಳೆಯಂಡಿಯ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ರವಿವಾರ ಹಳೆಯಂಡಿಯಲ್ಲಿ ನಡೆದಿದೆ.
ಕುಂದಾಪುರದ ಆದಿಲ್ ಎಂಬವರು ರವಿವಾರ ತನ್ನ ಸ್ನೇಹಿತರೊಂದಿಗೆ ಸಸಿಹಿತ್ಲು ಬೀಚ್ನಲ್ಲಿ ಮೀನು ಹಿಡಿಯಲು ಬಂದಿದ್ದರು. ಈ ವೇಳೆ ಹಲವು ಬ್ಯಾಂಕ್ಗಳ ಎಟಿಎಂ ಕಾರ್ಡ್ ಗಳು, ಆಧಾರ್ಕಾರ್ಡ್, ಪ್ಯಾನ್ ಕಾರ್ಡ್, ವಿದೇಶಿ ಕರೆನ್ಸಿ ಸಹಿತ ಭಾರತದ 40ಸಾವಿರ ರೂ. ಗಳಿದ್ದ ಪರ್ಸ್ ಕಳೆದುಕೊಂಡಿದ್ದರು.ಈ ಬಗ್ಗೆ ಹಳೆಯಂಗಡಿ ಸಂತೆಕಟ್ಟೆ ಪರಿಸದ ತನ್ನ ಸ್ನೇಹಿತ ರಿಝ್ವಾನ್ ಎಂಬವರಿಗೆ ಆದಿಲ್ ಮಾಹಿತಿ ನೀಡಿದ್ದರು.
ಅದೇ ದಿನ ಹಳೆಯಂಗಡಿ ರಿಕ್ಷಾ ನಿಲ್ದಾಣದ ಆಟೋ ಚಾಲಕ ಕರಾವಳಿ ದಿನೇಶ್ ಸಸಿಹಿತ್ಲುವಿಗೆ ಬಾಡಿಗೆಗೆ ಹೋಗಿದ್ದ ವೇಳೆ ಸುಮಾರು 9.30 ವೇಳೆ ರಸ್ತೆಯಲ್ಲಿ ಪರ್ಸ್ ವೊಂದು ಗೋಚರಿಸಿದ್ದು, ಅದನ್ನು ತೆಗೆದು ಇಟ್ಟುಕೊಂಡಿದ್ದರು. ಬಳಿಕ ಪರ್ಸ್ನಲ್ಲಿದ್ದ ಕಾಗದವೊಂದರಲ್ಲಿ ಬರೆದಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ್ದು, ಅದು ರಿಝ್ವಾನ್ ಅವರಿಗೆ ತಲುಪಿದೆ. ಈ ಬಗ್ಗೆ ಮೊದಲೇ ಮಾಹಿತಿ ಅರಿತಿದ್ದ ರಿಝ್ವಾನ್ ತನ್ನ ಸ್ನೇಹಿತ ಆದಿಲ್ ಅವರೊಂದಿಗೆ ಹಳೆಯಂಗಡಿ ರಿಕ್ಷಾ ನಿಲ್ದಾಣಕ್ಕೆ ಬಂದು ಸುಮಾರು 11 ಗಂಟೆಯ ವೇಳೆಗೆ ಪರ್ಸ್ ಪಡೆದು ಕೊಂಡರು.
ಈ ಸಂದರ್ಭ ಹಳೆಯಂಗಡಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಪದಾಧಿಕಾರಿಗಳಾದ ಕಲ್ಪವೃಕ್ಷ ಸತೀಶ್, ಸುಧೀರ್, ರಿಝ್ವಾನ್, ಆದಿಲ್ ಅವರ ಸ್ನೇಹಿತರು ಇದ್ದರು.