ಪುದು ಗ್ರಾಪಂನಲ್ಲಿ ಬಿಜೆಪಿ ಜೊತೆ ಮೈತ್ರಿ ಸಾಬೀತುಪಡಿಸಿದರೆ ಎಲ್ಲಾ ನಾಮಪತ್ರಗಳನ್ನು ಹಿಂಪಡೆಯುತ್ತೇವೆ: ಎಸ್.ಡಿ.ಪಿ.ಐ
ಫರಂಗಿಪೇಟೆ, ಫೆ.11: ಪುದು ಗ್ರಾಪಂ ಚುನಾವಣೆಯ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು ಎಸ್ ಡಿಪಿಐ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಎಸ್ ಡಿಪಿಐ ಪಕ್ಷವು ಬಿಜೆಪಿಗೆ ಯಾವತ್ತೂ ವಿರುದ್ಧವಾಗಿಯೇ ಇದೆ. ಪುದು ಗ್ರಾಪಂನಲ್ಲಿ ಬಿಜೆಪಿ ಜೊತೆ ಎಸ್ ಡಿಪಿಐ ಮೈತ್ರಿ ಮಾಡಿಕೊಂಡಿದೆ ಎನ್ನುವುದನ್ನು ಸಾಬೀತುಪಡಿಸಿದರೆ ಎಲ್ಲಾ ನಾಮಪತ್ರಗಳನ್ನು ಹಿಂಪಡೆಯಲಾಗುವುದು ಎಂದು ಎಸ್ ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಬಿಜೆಪಿ ಜೊತೆ ನಂಟಿದೆ. ಡಿ.ಬಿ. ಚಂದ್ರೇಗೌಡರಿಂದ ಎಸ್.ಎಂ. ಕೃಷ್ಣರವರೆಗೆ ಕಾಂಗ್ರೆಸ್ ನಾಯಕರು ಬಿಜೆಪಿಗೆ ತೆರಳಿದ್ದಾರೆ. ಮುಂಬೈಯ ಗೊಂಡಿಯಾ ಜಿಲ್ಲಾ ಪರಿಷತ್ ನಿಂದ ಇತ್ತೀಚೆಗೆ ಮೈಸೂರು ನಗರ ಪಾಲಿಕೆಯವರೆಗೆ ಒಳ ಒಪ್ಪಂದಗಳು ನಡೆದಿವೆ ಎಂದವರು ಹೇಳಿದ್ದಾರೆ.
ಎಸ್ ಡಿಪಿಐ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯ ನೀಡಿದರೆ ನಾವು ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಲ್ಲಿಸಿರುವ ಎಲ್ಲಾ ನಾಮಪತ್ರ ಗಳನ್ನು ಹಿಂಪಡೆಯುತ್ತೇವೆ. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲಿ. ಬಿಜೆಪಿಯಿಂದ ಒಂದು ರೂಪಾಯಿ ಪಡೆದಿರುವುದನ್ನು ಬಗ್ಗೆ ಸಾಬೀತುಪಡಿಸಿದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ. ಇಲ್ಲವಾದಲ್ಲಿ ಫಾರೂಕ್ ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿ ರಿಯಾಝ್ ಫರಂಗಿಪೇಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.