ಪುತ್ತೂರಿನಲ್ಲಿ ಶೀಫ್ರ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಶಕುಂತಳಾ ಶೆಟ್ಟಿ
ಪುತ್ತೂರು, ಫೆ. 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ತಾಲೂಕಿನ ಕೇಂದ್ರ ಭಾಗವಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿಯ ಸ್ಥಳದಲ್ಲಿ ಶೀಘ್ರವಾಗಿ ಆರಂಭಗೊಳ್ಳಲಿದೆ ಎಂದು ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಅವರು ಹೇಳಿದರು.
ಅವರು ಗುರುವಾರ ಕ್ಯಾಂಟೀನ್ ನಿರ್ಮಾಣ ಸ್ಥಳವನ್ನು ಪರೀಶಲನೆ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ 10 ಹೊಸ ಕ್ಯಾಂಟೀನ್ಗಳು ಆರಂಭವಾಗಲಿವೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 5, ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 1, ಬಂಟ್ವಾಳ, ಪುತ್ತೂರು, ಸುಳ್ಯ ಹಾಗು ಬೆಳ್ತಂಗಡಿಯಲ್ಲಿ ತಲಾ 1 ಕ್ಯಾಂಟೀನ್ ಗಳು ಮಂಜೂರುಗೊಂಡಿದೆ. ಪುತ್ತೂರಿನಲ್ಲಿ ಈಗಾಗಲೇ ಗುರುತಿಸಲಾದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಸುತ್ತ ಮಿನಿ ವಿಧಾನ ಸೌಧ, ಸರ್ಕಾರಿ ಆಸ್ಪತ್ರೆ, ಶಿಕ್ಷಣ ಇಲಾಖೆ, ವಾರದ ಸಂತೆಯಿದ್ದು, ಕ್ಯಾಂಟೀನ್ ಆರಂಭಗೊಂಡರೆ ಸಂತೆಗೆ ಬರುವವರಿಗೆ, ಸರಕಾರಿ ಕೆಲಸಗಳಿಗೆ ಬರುವವರಿಗೆ, ಸರಕಾರಿ ಆಸ್ಪತ್ರೆಗೆ ಬರುವ ಎಲ್ಲಾ ಬಡವರಿಗೆ ಇದರ ಪ್ರಯೋಜನ ಅಗಲಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಆಗುವ ಮುನ್ನ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕೆಡಿಪಿ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಇಂಟಕ್ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಸಾಮೆತ್ತಡ್ಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ, ನಗರಸಭೆ ಆಶ್ರಯ ಸಮಿತಿ ಸದಸ್ಯೆ ಶಾರದಾ ಅರಸ್, ಟಿ.ಅಮರನಾಥ ಬಪ್ಪಳಿಗೆ, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈ, ಉಲ್ಲಾಸ್ ಕೋಟ್ಯಾನ್, ಅಕ್ರಮ ಸಕ್ರಮ ಸಮಿತಿ ಸದಸ್ಯ ದಿನೇಶ್ ಪಿ.ವಿ, ಶಿವರಾಮ ಆಳ್ವ, ಪೂರ್ಣೇಶ್, ಅಂಬೆಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ, ಉಮರ್ ಕೆಮ್ಮಾರ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.