ಮಂಜನಾಡಿ ಗ್ರಾ.ಪಂ.ನಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಯು.ಟಿ.ಖಾದರ್ ಶಂಕುಸ್ಥಾಪನೆ
ಕೊಣಾಜೆ, ಫೆ. 24: ಕರ್ನಾಟಕದ ಜನತೆ ಜೈಲಿಗೆ ಹೋದವರನ್ನು ಮರೆಯುತ್ತಾರೆ. ಅನ್ನ, ಆಹಾರ, ಆರೋಗ್ಯ ಕೊಟ್ಟವರನ್ನು ಯಾವುದೇ ಕಾಲಕ್ಕೂ ಮರೆಯಲಾರರು. ಮಂಜನಾಡಿ ಗ್ರಾಮದಲ್ಲಿ ಹಕ್ಕುಪತ್ರಕ್ಕಾಗಿ 850 ಅರ್ಜಿಗಳು ಬಂದಿದ್ದು 580 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ಅರ್ಹರಿಗೆ ವಾರದೊಳಗೆ ವಿತರಿಸುವ ಕೆಲಸ ಮಾಡಲಿದ್ದೇವೆ. ಅದೇನಿದ್ದರೂ ತಾಂತ್ರಿಕ ತೊಂದರೆ ಹೊರತುಪಡಿಸಿ ಕಳೆದ 25ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ ಹಕ್ಕುಪತ್ರ ಖಂಡಿತಾ ವಿತರಿಸಲಿದ್ದೇವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಚಿವ ಯು.ಟಿ. ಖಾದರ್ ಹೇಳಿದರು.
ಮಂಜನಾಡಿ ಗ್ರಾಮದ ಅಲ್ ಅನ್ಸಾರ್ ನಗರದ ಮೈದಾನದಲ್ಲಿ ಶನಿವಾರ ನಡೆದ ಮಂಜನಾಡಿ ಗ್ರಾಮ ಪಂಚಾಯಿತಿಯ ಹಕ್ಕುಪತ್ರ ವಿತರಣೆ, ಅಲ್ಪಸಂಖ್ಯಾತ ಮುಸ್ಲಿಂ ವಸತಿ ಶಾಲೆ, ಪರಿಶಿಷ್ಠ ಪಂಗಡ ಮಕ್ಕಳ ವಸತಿ ಗೃಹ ಹಾಗೂ ವಿವಿಧ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಡವಾಳ ಹೂಡಿಕೆಯಲ್ಲಿ ರಾಜ್ಯ ನಂ.1 ಆಗಿದೆ. ಕಳೆದ ವರ್ಷ ಏಳು ಲಕ್ಷ ಕೋಟಿ, ಈ ವರ್ಷ ಹದಿನೇಳು ಲಕ್ಷ ಕೋಟಿ ರೂ. ಅನುದಾನ ಹರಿದು ಬಂದಿದೆ. ಕಳೆದ ಬಾರಿ ಆಡಳಿತ ನಡೆಸಿದ ಪಕ್ಷಗಳು ಕೇವಲ ಮೂರು ಯೋಜನೆ ಹೇಳುತ್ತಿದ್ದು ನಾಲ್ಕನೆಯ ಯೋಜನೆಯ ಹೇಳಲು ಉಳಿಸಿಲ್ಲ. ಜನರು ಆ ಸರಕಾರ ವನ್ನು ಮನೆಗೆ ಕಳುಹಿಸಿದ್ದು ಪುಣ್ಯ, ಒಂದು ವೇಳೆ ಅವರಿಗೆ ಆಡಳಿತಾವಕಾಶ ಕೊಟ್ಡಿದ್ದರೆ ಜನರ ಕೈಗೆ ತಟ್ಟೆ ಕೊಡುವುದಷ್ಟೆ ಬಾಕಿ ಇತ್ತು ಎಂದು ವ್ಯಂಗ್ಯವಾಡಿದರು.
ಈ ಸಂದರ್ಭ ಕಂದಾಯ ಅಧಿಕಾರಿ ಸ್ಟೀಫನ್.ಆರ್, ಗ್ರಾಮಕರಣಿಕ ಪ್ರಸಾದ್, ಗ್ರಾಮಸಹಾಯಕ ಮೈಕಲ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಆಹಾರ ನಿಗಮ ರಾಜ್ಯ ಸದಸ್ಯ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಸದಸ್ಯೆ ಸುರೇಖ ಚಂದ್ರಹಾಸ್, ಮುಖಂಡರುಗಳಾದ ಎನ್.ಎಸ್.ಕರೀಂ, ನೆಕ್ಕರೆ ಮೋನು, ಸದಾಶಿವ ಉಳ್ಳಾಲ, ಮಂಗಳೂರು ಕ್ಷೇತ್ರ ಚುನಾವಣೆ ಸಂಚಾಲಕ ಈಶ್ವರ ಉಳ್ಳಾಲ್, ಸುದರ್ಶನ್ ಶೆಟ್ಟಿ, ಕೆಎಸ್ಆರ್ ಟಿಸಿ ನಿಗಮದ ಸದಸ್ಯ ರಮೇಶ್ ಶೆಟ್ಟಿ ಬೋಳಿಯಾರು, ಮಂಜನಾಡಿ ಗ್ರಾಮ ಪಂ. ಅಧ್ಯಕ್ಷ ಮಹಮ್ಮದ್ ಅಸೈ, ರಹ್ಮಾನ್ ಕೋಡಿಜಾಲ್, ಪದ್ಮನಾಭ ನರಿಂಗಾನ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಉಪಸ್ಥಿತರಿದ್ದರು.