ಫೆ. 26: ಮಂಗಳೂರು ವಿಶ್ವವಿದ್ಯಾನಿಲಯದ 36ನೆ ಘಟಿಕೋತ್ಸವ
97 ಮಂದಿಗೆ ಪಿಎಚ್ಡಿ ಪ್ರದಾನ, 65 ವಿದ್ಯಾರ್ಥಿಗಳಿಗೆ ಪ್ರಥಮ ರ್ಯಾಂಕ್ ಪುರಸ್ಕಾರ
ಮಂಗಳೂರು, ಫೆ.24: ಮಂಗಳೂರು ವಿಶ್ವವಿದ್ಯಾನಿಲಯದ 36ನೆ ವಾರ್ಷಿಕ ಘಟಿಕೋತ್ಸವವು ಫೆ.26ರಂದು ಪೂ.11ಕ್ಕೆ ವಿವಿ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ಕುಲಪತಿ ಡಾ. ಕೆ.ಭೈರಪ್ಪ ಹೇಳಿದರು.
ನಗರದ ಮಂಗಳೂರು ವಿವಿ ಕಾಲೇಜಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಂಗಾಪುರ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಕ್ಷ ಪ್ರೊ. ಸುಬ್ರ ಸುರೇಶ್ ಮುಖ್ಯ ಅತಿಥಿಯಾಗಿ ಟಿಕೋತ್ಸವ ಭಾಷಣ ಮಾಡಲಿರುವರು. ರಾಜ್ಯಪಾಲ ಹಾಗೂ ವಿವಿ ಕುಲಾಧಿಪತಿ ವಾಜುಭಾಯಿ ರೂಡಾಭಾಯಿ ವಾಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸುವರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 97 ಮಂದಿಗೆ ಡಾಕ್ಟರೇಟ್ ಪದವಿ (ಕಲೆ-17, ವಿಜ್ಞಾನ 74, ವಾಣಿಜ್ಯ-04, ಶಿಕ್ಷಣ-02), 45 ಮಂದಿಗೆ ಚಿನ್ನದ ಪದಕ ಮತ್ತು 75 ಮಂದಿಗೆ ನಗದು ಬಹುಮಾನ ನೀಡಲಾಗುವುದು. ವಿವಿಧ ಕೋರ್ಸುಗಳ 242 ರ್ಯಾಂಕ್ಗಳಲ್ಲಿ ಪ್ರಥಮ ರಾಂಕ್ ಪಡೆದ 65 ಮಂದಿಗೆ ರ್ಯಾಂಕ್ ಪ್ರಮಾಣ ಪತ್ರ (ಸ್ನಾತಕೋತ್ತರ ಪದವಿ-48 ಮತ್ತು ಪದವಿ-17: ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ-10, ಶಿಕ್ಷಣ-02, ಸ್ನಾತಕೋತ್ತರ ಡಿಪ್ಲೊಮಾ-03) ನೀಡಲಾಗುವುದು ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯವು 2016-17ನೆ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಹಾಜರಾದ 36,280 ವಿದ್ಯಾರ್ಥಿಗಳ ಪೈಕಿ 26,164 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 6,323 ವಿದ್ಯಾರ್ಥಿಗಳು ಹಾಜರಾಗಿದ್ದು, 5,929 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 29,843 ವಿದ್ಯಾರ್ಥಿಗಳು ಹಾಜರಾಗಿದ್ದು, 20,122 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ 17 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಡಾ.ಕೆ. ಭೈರಪ್ಪ ತಿಳಿಸಿದರು.
ಘಟಿಕೋತ್ಸವದಲ್ಲಿ ಪ್ರೊ. ಸುಬ್ರ ಸುರೇಶ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಡಾ.ಕೆ. ಭೈರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಂ.ಎಂ.ಖಾನ್, ಕುಲಸಚಿವ ಪ್ರೊ.ಬಿ.ಎಸ್. ನಾಗೇಂದ್ರ ಪ್ರಕಾಶ್, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಉದಯ್ಕುಮಾರ್ ಇರ್ವತ್ತೂರು, ಪ್ರೊ.ರವೀಂದ್ರ ಆಚಾರ್ ಉಪಸ್ಥಿತರಿದ್ದರು.