ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಭೇಟಿ
ಮಂಗಳೂರು,ಮಾ.20: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅವರನ್ನು ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯಸಭಾ ಸದಸ್ಯ ಹರಿಪ್ರಸಾದ್, ಎಐಸಿಸಿ ಪ್ರ.ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಮೊಯ್ದಿನ್ ಬಾವಾ, ಐವನ್ ಡಿಸೋಜ, ಮೇಯರ್ ಬಾಸ್ಕರ್ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.
40 ನಿಮಿಷ ಕಾದು ಕುಳಿತ ಪೂಜಾರಿ
ನೆಹರೂ ಕುಟುಂಬದ ಒಡನಾಡಿಯೂ, ಕುದ್ರೋಳಿ ದೇವಸ್ಥಾನದ ರೂವಾರಿಯೂ ಆಗಿರುವ ಜನಾರ್ದನ ಪೂಜಾರಿ ಅವರು ರಾಹುಲ್ ಗಾಂಧಿ ಅವರಿಗಾಗಿ ದೇವಸ್ಥಾನದ ದ್ವಾರದ ಬಳಿ ಸುಮಾರು 40 ನಿಮಿಷ ಕಾದು ಕುಳಿತರು. ಕಾರಿನಿಂದಳಿದ ರಾಹುಲ್ ಗಾಂಧಿ ಕೈ ಮುಗಿದು ನೇರ ಪೂಜಾರಿ ಬಳಿ ತೆರಳಿ ಆರೋಗ್ಯ ವಿಚಾರಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಪ್ರವೇಶ ದ್ವಾರದತ್ತ ಬಂದರೂ ನಂತರ ಪೂಜಾರಿಯ ಮನವಿಯ ಮೇರೆಗೆ ಮತ್ತೆ ಕಲ್ಯಾಣ ಮಂಟಪಕ್ಕೆ ತೆರಳಿ ವೀಕ್ಷಿಸಿದರು. ಈ ಸಂದರ್ಭ ರಾಹುಲ್ ಗಾಂಧಿ ಅವರು ಪೂಜಾರಿಯ ಕೈ ಹಿಡಿದೇ ಹೆಜ್ಜೆ ಹಾಕಿರುವುದು ವಿಶೇಷ.